ADVERTISEMENT

ಮುಂಬೈ: ಗುಜರಾತ್ ಸ್ಫೋಟ ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 12:41 IST
Last Updated 20 ಸೆಪ್ಟೆಂಬರ್ 2013, 12:41 IST

ಮುಂಬೈ (ಐಎಎನ್ಎಸ್): ಗುಜರಾತಿನ ಸೂರತ್ ಮತ್ತು ಅಹಮದಾಬಾದ್ ನಲ್ಲಿ 2008ರಲ್ಲಿ ಸಂಭವಿಸಿದ ಭಯೋತ್ಪಾದಕ ಬಾಂಬ್ ಸ್ಫೋಟಗಳಲ್ಲಿ ಷಾಮೀಲಾಗಿದ್ದನೆಂದು ಶಂಕಿಸಲಾಗಿದ್ದ ಆರೋಪಿ ಇಂಡಿಯನ್ ಮುಜಾಹಿದೀನ್ ಸದಸ್ಯ ಉಸ್ಮಾನಿ ಶುಕ್ರವಾರ ಇಲ್ಲಿನ ನ್ಯಾಯಾಲಯವೊಂದಕ್ಕೆ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ರಾಯಗಡ ಜಿಲ್ಲೆಯ ತಲೋಜ ಸೆರೆಮನೆಯಿಂದ ಏಳು ಮಂದಿ ಆರೋಪಿಗಳನ್ನು  ದಕ್ಷಿಣ ಮುಂಬೈಯ ಸೆಷನ್ಸ್ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆ ತರುತ್ತಿದ್ದಾಗ ಪೊಲೀಸರನ್ನು ಮುಜುಗರಕ್ಕೆ ಈಡು ಮಾಡಿದ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಾರಿಯಾಗಿರುವ ಉಸ್ಮಾನಿಗಾಗಿ ಮುಂಬೈ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕ್ರಮವಾಗಿ ಗುಜರಾತಿನ ವಜ್ರ ಹಾಗೂ ವಾಣಿಜ್ಯ ರಾಜಧಾನಿಗಳೆಂದು ಖ್ಯಾತಿ ಪಡೆದಿರುವ ಸೂರತ್ ಮತ್ತು ಅಹಮದಾಬಾದ್ ನಗರಗಳಲ್ಲಿ ಭಯೋತ್ಪಾದಕ ಸ್ಫೋಟಗಳನ್ನು ನಡೆಸುವ ಸಲುವಾಗಿ ವಾಹನಗಳ ವ್ಯವಸ್ಥೆಯನ್ನು ಮಾಡುತ್ತಿದ್ದ ಆರೋಪ ಉಸ್ಮಾನಿಯ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.