ADVERTISEMENT

ಮುಖ್ಯವಾಹಿನಿಗೆ ಜಾರವ; ವಿರೋಧ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಕೋಲ್ಕತ್ತ (ಪಿಟಿಐ): ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜಾರವ ಬುಡಕಟ್ಟು ಜನಾಂಗವನ್ನು ರಾಷ್ಟ್ರದ ಮುಖ್ಯವಾಹಿನಿಗೆ ತರುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಸರ್ವೈವಲ್ ಇಂಟರ್‌ನ್ಯಾಷನಲ್ ಎಂಬ ಸಂಘಟನೆ ತೀವ್ರ ವಿರೋಧಿಸಿದೆ.

ಅತಿ ಪುರಾತನವಾದ ಈ ಬುಡಕಟ್ಟು ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಪ್ರಸ್ತಾವ ಭಾರಿ ಅಪಾಯಕಾರಿ ಹೆಜ್ಜೆ ಎಂದು ಲಂಡನ್ ಮೂಲದ ಈ ಸಂಘಟನೆಯು ಹೇಳಿದೆ. ಇಂತಹ ಬುಡಕಟ್ಟು ಜನರನ್ನು ಬಲವಂತವಾಗಿ ಮುಖ್ಯವಾಹಿನಿಗೆ ತರುವುದು ಸಲ್ಲ. ಇಂತಹ  ಪ್ರಸ್ತಾವ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲಿನಿಂದ ವಿರೋಧಿಸಲಾಗುತ್ತಿದ್ದು, ಅದಕ್ಕೆ ಮಾನ್ಯತೆಯೂ ಸಿಕ್ಕಿದೆ ಎಂದು ಸಂಘಟನೆಯ ತಿಳಿಸಿದೆ.

ದ್ವೀಪದ ಜಾರವ ಬುಡಕಟ್ಟು ಜನರು ವಿದೇಶಿ ಪ್ರವಾಸಿಗರ ಎದುರು ಅರೆನಗ್ನಾವಸ್ಥೆಯಲ್ಲಿ ನೃತ್ಯ ಮಾಡಿದ ದೃಶ್ಯವನ್ನು ವೆಬ್‌ಸೈಟ್‌ಗಳಲ್ಲಿ ಪ್ರಸಾರ ಮಾಡಿದ ನಂತರ ಕೇಂದ್ರದ ಬುಡಕಟ್ಟು ವ್ಯವಹಾರ ಸಚಿವ ಕಿಶೋರ್ ಚಂದ್ರ ದೇವ್, ಈ ಜನಾಂಗವನ್ನು ಮುಖ್ಯ ವಾಹಿನಿಗೆ ತರುವ ಮಾತನಾಡಿದ್ದರು.

`ಜಾರವ ಬುಡಕಟ್ಟು ಜನರನ್ನು ಸದಾಕಾಲ ಕಾಡುಪ್ರಾಣಿಗಳಂತೆ ಇರಲು ಬಿಡುವುದು ತಪ್ಪು ಎಂಬುದು ನನ್ನ ಸ್ವಂತ ಅಭಿಪ್ರಾಯ. ಹಾಗಂತ ಅವರಿಗೆ ಮಾಲ್ ಅಥವಾ ಕರಿದು ತಿನಿಸುಗಳನ್ನು ತಿನ್ನುವ ಸಂಸ್ಕೃತಿ ಪರಿಚಯಿಸಬೇಕು ಎಂದರ್ಥಲ್ಲ~ ಎಂದು ಸಚಿವರು ಹೇಳಿದ್ದರು.

55 ಸಾವಿರ ವರ್ಷಗಳಿಂದ ಅರಣ್ಯ ವಾಸಿಗಳಾಗಿರುವ ಈ ಬುಡಕಟ್ಟು ಜನಾಂಗದವರು ಆರ್ಥಿಕವಾಗಿ ಬಡವರಿರಬಹುದು, ಆದರೆ ದೈಹಿಕವಾಗಿ ತುಂಬಾ ಆರೋಗ್ಯವಂತರು. ಈ ಹಿಂದೆ ಮುಖ್ಯವಾಹಿನಿಗೆ ತರಲಾದ ಅಂಡಮಾನ್ ಬುಡಕಟ್ಟು ಜನರ ಆರೋಗ್ಯ ಹಾಳಾಗುತ್ತಿದೆ ಎಂದು ಸಂಘಟನೆಯ ಸೊಫಿಯಾ ಗ್ರಿಗ್ ತಿಳಿಸಿದ್ದಾರೆ. ಯಾವ ರೀತಿಯ ಅಭಿವೃದ್ಧಿ ಬೇಕು ಎಂಬುದನ್ನು ಬುಡಕಟ್ಟು ಜನರೇ ನಿರ್ಧರಿಸಬೇಕೇ ವಿನಾ ಸರ್ಕಾರವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.