ADVERTISEMENT

ಮೂರನೇ ದಿನವೂ ಮುಂದುವರಿದ ಜಗನ್ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 7:50 IST
Last Updated 5 ಜೂನ್ 2012, 7:50 IST

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಕಡಪಾ ಸಂಸದ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರ ವಿಚಾರಣೆಯು ಮೂರನೇಯ ದಿನವೂ ಮುಂದುವರಿದಿದ್ದು, ಅವರ ಇಬ್ಬರು ಸಹಾಯಕರನ್ನು ಸಿಬಿಐ ಮಂಗಳವಾರ ವಿಚಾರಣೆಗೆ ಒಳಪಡಿಸಲಿದೆ.

ಸಿಬಿಐ ಸಮನ್ಸ್‌ಗೆ ಸ್ಪಂದಿಸಿರುವ ಜಗನ್ ಆಪ್ತರಾದ ಕಾಂಗ್ರೆಸ್ ಶಾಸಕ ಡಿ. ಚಂದ್ರಶೇಖರ್ ರೆಡ್ಡಿ ಹಾಗೂ ಸಾಕ್ಷಿ ಟಿವಿ ನಿರ್ದೇಶಕ ಎಸ್.ರಾಮಕೃಷ್ಣ ರೆಡ್ಡಿ ಅವರು ವಿಚಾರಣೆಗೆ ಒಳಪಡಲು ಸಿಬಿಐ ಕಚೇರಿ ಆಗಮಿಸಿದ್ದಾರೆ.

ಜಗನ್ ಅವರ ಒಡೆತನದ ಕಂಪೆನಿಯೊಂದರಲ್ಲಿ ನಿರ್ದೇಶಕನಾಗಿರುವ ಚಂದ್ರಶೇಖರ್ ರೆಡ್ಡಿ ಇತ್ತೀಚಿಗಷ್ಟೇ ಜಗನ್ ತಾಯಿ ವೈ.ಎಸ್.ವಿಜಯಮ್ಮ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು.

ಜನನಿ ಇನ್‌ಫ್ರಾಸ್ಟ್ರಕ್ಚರ್ ಮತ್ತು ಜಗತಿ ಪಬ್ಲಿಕೇಷನ್ ಸಂಸ್ಥೆಗಳಿಂದ ಜಗನ್ ಬಂಡವಾಳ ಸ್ವೀಕರಿಸಿರುವ ಕುರಿತಂತೆ ಚಂದ್ರಶೇಖರ್ ಹಾಗೂ ರಾಮಕೃಷ್ಣ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ನ್ಯಾಯಾಂಗ ಬಂಧನದಲ್ಲಿರುವ ಜಗನ್ ಅವರನ್ನು ವಿಚಾರಣೆಗಾಗಿ ಐದು ದಿನಗಳ ಕಾಲ ತನ್ನ ವಶಕ್ಕೆ ತೆಗೆದುಕೊಂಡಿರುವ ಸಿಬಿಐ ಅವರನ್ನು ಕೋಟಿಯಲ್ಲಿರುವ ಕಚೇರಿಯಲ್ಲಿ ತನಿಖೆಗೆ ಒಳಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.