ADVERTISEMENT

ರಾಜಕೀಯ ಪರ್ಯಾಯ: ಕೇಜ್ರಿವಾಲ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ):  ರಾಜಕೀಯ ಸೇರುವ ನಿರ್ಧಾರ ಸಮರ್ಥಿಸಿಕೊಂಡಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅರವಿಂದ್ ಕೇಜ್ರಿವಾಲ್, ಯಾವುದೇ ತೀರ್ಮಾನದ ಪರ ನೂರಕ್ಕೆ ನೂರರಷ್ಟು ಒಮ್ಮತ ಇರುವುದಿಲ್ಲ ಎಂದಿದ್ದಾರೆ.

ರಾಜಕೀಯ ಸೇರುವ ನಿರ್ಧಾರಕ್ಕಾಗಿ, ಬರ್ಖಾಸ್ತುಗೊಂಡ ಅಣ್ಣಾ ತಂಡದ ಕೆಲವು ಸದಸ್ಯರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕೇಜ್ರಿವಾಲ್, ಈ ನಿರ್ಧಾರ ವಿರೋಧಿಸುತ್ತಿರುವ `ಅತ್ಯಂತ ಆತ್ಮೀಯ~ ಗೆಳೆಯರ ಸಂಖ್ಯೆ ಅತ್ಯಲ್ಪ ಎಂದಿದ್ದಾರೆ.

ಇಂಡಿಯಾ ಎಗೇನ್ಸ್ಟ್ ಕರಪ್ಷನ್ ಸಂಘಟನೆಯ ಸ್ವಯಂ ಪ್ರೇರಿತರಿಗೆ ಬರೆದಿರುವ ಪತ್ರದಲ್ಲಿ  ಹೀಗೆ ಹೇಳಿದ್ದಾರೆ.
ಅಣ್ಣಾ ತಂಡವು ಜಂತರ್ ಮಂತರ್ ಬಳಿ ನಡೆಸಿದ ಅನಿರ್ದಿಷ್ಟ ಉಪವಾಸದ ಕೊನೆಯಲ್ಲಿ, ರಾಜಕೀಯ ಸೇರಲು ಕೈಗೊಂಡ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಸಮೀಕ್ಷೆ ಪ್ರಕಾರ ಶೇ 90ರಷ್ಟು ಜನರು ಅಣ್ಣಾ ನೇತೃತ್ವದಲ್ಲಿ ರಾಜಕೀಯ ಪರ್ಯಾಯಬಯಸಿದ್ದಾರೆ. ಆದರೆ  ಎರಡು ವರ್ಷಗಳಿಂದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಮರ್ಪಣಾ ಭಾವದಿಂದ ಭಾಗಿಯಾಗಿದ್ದ ಕೆಲವು ಆತ್ಮೀಯರಿಗೆ ಈ ನಿರ್ಧಾರದಿಂದ ಆಘಾತವಾಗಿದೆ ಎಂದಿದ್ದಾರೆ.

ವಂಚನೆ ಪ್ರಕರಣ
ಮೀರತ್ (ಪಿಟಿಐ):  ರಾಜಕೀಯ ಸೇರುವ ಅಣ್ಣಾ ತಂಡದ ನಿರ್ಧಾರದಿಂದ ಹತಾಶಗೊಂಡಿರುವ ಬೆಂಬಲಿಗರೊಬ್ಬರು, ಅರವಿಂದ್ ಕೇಜ್ರಿವಾಲ್ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ!
ಇಲ್ಲಿನ ಕಾಲೇಜೊಂದರ ಅಧ್ಯಾಪಕ ಹರೀಶ್ವರ್ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಲ್ಲಿ ಈ ಅರ್ಜಿ  ದಾಖಲಿಸಿದ್ದಾರೆ. ಆ.14ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.