ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿ ನಿಗದಿ ಮಾಡಿರುವ ಕನಿಷ್ಠ ಕೂಲಿ ಮಾದರಿಯಲ್ಲಿಯೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವೇತನ ನಿಗದಿ ಮಾಡಲು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚಿಸಿದೆ.
ಈ ಯೋಜನೆ ಅಡಿ ರಾಜ್ಯ ಸರ್ಕಾರಗಳು ನಿಗದಿ ಮಾಡಿರುವ ಕನಿಷ್ಠ ಕೂಲಿಪರಿಶೀಲನೆ ಮಾಡಿ, ವೇತನ ನಿಗದಿ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಸಿರಿಯಾಕ್ ಜೋಸೆಫ್ ಹಾಗೂ ಜ್ಞಾನಸುಧಾ ಮಿಶ್ರ ಅವರನ್ನು ಒಳಗೊಂಡ ಪೀಠ ತಿಳಿಸಿದೆ.
`ಇದೊಂದು ಪ್ರಯೋಜನಕಾರಿ ಕಾಯ್ದೆಯಾಗಿದೆ. ಹಾಗಿರುವಾಗ ಕನಿಷ್ಠ ಕೂಲಿ ಹಾಗೂ ಎನ್ಆರ್ಇಜಿಎ ಅಡಿ ನೀಡುವ ವೇತನಗಳಲ್ಲಿ ಭಿನ್ನತೆ ಯಾಕೆ?~ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಎನ್ಆರ್ಇಜಿಎ ಅಡಿ ನೀಡುವ ವೇತನವು ರಾಜ್ಯ ಸರ್ಕಾರಗಳು ಕೃಷಿ ಕಾರ್ಮಿಕರಿಗೆ ನಿಗದಿ ಮಾಡಿರುವ ಕನಿಷ್ಠ ಕೂಲಿ ಮೊತ್ತಕ್ಕಿಂತ ಕಡಿಮೆ ಇರಬಾರದು ಎಂದು ಕಳೆದ ಸೆಪ್ಟೆಂಬರ್ 23ರಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರವು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಕೇಂದ್ರದ ಮನವಿಗೆ ಎರಡು ವಾರದೊಳಗೆ ಪ್ರತಿಕ್ರಿಯಿಸುವಂತೆ ವಿವಿಧ ಕಾರ್ಮಿಕ ಒಕ್ಕೂಟಗಳಿಗೆ ಪೀಠವು ನೋಟಿಸ್ ಜಾರಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.