ಲಖನೌ: ದೀಪಾವಳಿ ಆಚರಣೆಯ ವೇಳೆ ವಾರಾಣಸಿಯಲ್ಲಿ ಭಗವಂತ ಶ್ರೀರಾಮನಿಗೆ ಆರತಿ ಮಾಡಿದ ಮತ್ತು ಹನುಮಾನ್ ಚಾಲೀಸಾ ಪಠಿಸಿದ ಮುಸ್ಲಿಂ ಮಹಿಳೆಯರನ್ನು ಇಸ್ಲಾಂನಿಂದ ಬಹಿಷ್ಕರಿಸುವ ನಿರ್ಧಾರವನ್ನು ಇಸ್ಲಾಂ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ದೇವಬಂದ್ ತೆಗೆದುಕೊಂಡಿದೆ.
ರಾಮನನ್ನು ಪೂಜಿಸುವ ಮೂಲಕ ಮುಸ್ಲಿಂ ಮಹಿಳೆಯರು ಇಸ್ಲಾಂಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ.
‘ಅಲ್ಲಾನನ್ನು ಬಿಟ್ಟರೆ ಬೇರೆ ಯಾರನ್ನೂ ಪೂಜಿಸಲು ಇಸ್ಲಾಂನಲ್ಲಿ ಅವಕಾಶ ಇಲ್ಲ’ ಎಂದು ಸಹಾರನ್ಪುರದಲ್ಲಿರುವ ದಾರುಲ್ ಉಲೂಮ್ನ ಮೌಲ್ವಿಯೊಬ್ಬರು ಹೇಳಿದ್ದಾರೆ. ಒಂದು ವೇಳೆ, ದೇವರ ಕ್ಷಮೆ ಕೇಳಿದರೆ ಬಹಿಷ್ಕಾರಕ್ಕೆ ಒಳಗಾಗಿರುವ ಮಹಿಳೆಯರು ಮತ್ತೆ ಇಸ್ಲಾಂಗೆ ಮರಳಬಹುದು ಎಂದು ಅವರು ಹೇಳಿದ್ದಾರೆ.
ಸಮರ್ಥನೆ: ಆದರೆ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ. ‘ಹಲವು ವರ್ಷಗಳಿಂದ ನಾವು ರಾಮನಿಗೆ ಆರತಿ ಎತ್ತುತ್ತಿದ್ದೇವೆ. ಇದು ನಮ್ಮ ಸಮ್ಮಿಳಿತ ಸಂಸ್ಕೃತಿಯ ಭಾಗ. ಬೇರೆ ಧರ್ಮಗಳ ದೇವರನ್ನು ಪೂಜಿಸಿದವರು ತಮ್ಮ ಧರ್ಮವನ್ನು ತ್ಯಜಿಸುತ್ತಾರೆ ಎಂದು ಯೋಚಿಸುವುದು ಮೂರ್ಖತನ’ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.