ಲಖನೌ (ಪಿಟಿಐ): ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್ಸಿಟಿಸಿ) ಸ್ಥಾಪನೆಯನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿರುವ ಕೇಂದ್ರ, ರಾಜ್ಯ ಸರ್ಕಾರಗಳು ಆಕ್ಷೇಪಿಸುತ್ತಿರುವ ಅಂಶಗಳನ್ನು ಕೈಬಿಡುವುದಾಗಿ ಮಂಗಳವಾರ ತಿಳಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ದೂರ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಇಲಾಖೆ ಸಚಿವ ಕಪಿಲ್ ಸಿಬಲ್, `ಎನ್ಸಿಟಿಸಿ ಕೇಂದ್ರ ಸಮಿತಿಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಪ್ರಾತಿನಿಧ್ಯ ಇರುತ್ತದೆ. ಆದಾಗ್ಯೂ, ರಾಜ್ಯಗಳು ಆಕ್ಷೇಪಿಸುವಂತ ಅಂಶಗಳ ಕುರಿತು ಮಾತುಕತೆ ನಡೆಸಲು ನಾವು ಸಿದ್ಧವಿದ್ದೇವೆ. ಅಗತ್ಯಬಿದ್ದರೆ ಅಂತಹವುಗಳನ್ನು ಕೈಬಿಡಲಾಗುವುದು~ ಎಂದರು.
ಎನ್ಸಿಟಿಸಿ ರಚನೆಯ ಅಗತ್ಯತೆ ಬಗ್ಗೆ ತಾರ್ಕಿಕ ಆಧಾರಗಳನ್ನು ನೀಡಿದ ಅವರು, `ಭಯೋತ್ಪಾದನೆಯನ್ನು ನಿಗ್ರಹಿಸುವ ಕುರಿತು ಕೇಂದ್ರ ಸರ್ಕಾರದ ಬಳಿ ಇರುವ ಅಧಿಕಾರವನ್ನು ಎನ್ಸಿಟಿಸಿಗೆ ವರ್ಗಾಯಿಸುವ ಉದ್ದೇಶ ಇದೆ. ಎನ್ಸಿಟಿಸಿಗೆ ಕೇಂದ್ರ ಸಮಿತಿ ಇದ್ದು, ಅದಕ್ಕೆ ಒಬ್ಬರು ನಿರ್ದೇಶಕರು, ಮೂವರು ಜಂಟಿ ನಿರ್ದೇಶಕರು ಹಾಗೂ ರಾಜ್ಯಗಳಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ರಚಿಸಲಾಗಿರುವ ಸಂಸ್ಥೆ/ಪಡೆಗಳ ಮುಖ್ಯಸ್ಥರು ಇರುತ್ತಾರೆ~ ಎಂದರು.
ಎನ್ಸಿಟಿಸಿ ರಚನೆಗೆ 13 ರಾಜ್ಯಗಳು ವಿರೋಧ ವ್ಯಕ್ತಪಡಿಸಿ, ಇದರಿಂದ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳ್ಳುತ್ತದೆ ಎಂದು ಆಕ್ಷೇಪಿಸಿವೆ. ಇದರಲ್ಲಿ ಯುಪಿಎ ಅಂಗ ಪಕ್ಷವಾದ ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಕೂಡ ಸೇರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.