ADVERTISEMENT

ರೈಲ್ವೆ ರಿಯಾಯಿತಿ ಟಿಕೆಟ್ ಪಡೆಯಲು ಶಾಸಕರ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ನವದೆಹಲಿ (ಪಿಟಿಐ): ಅಸಂಘಟಿತ ವಲಯದ ಕೂಲಿ, ಕಾರ್ಮಿಕರು ರಿಯಾಯಿತಿ ದರದಲ್ಲಿ ಟಿಕೆಟ್ ಪಡೆಯಲು ಇದ್ದ ಕಟ್ಟಳೆಗಳನ್ನು ಸಡಿಲಗೊಳಿಸುವ ಮಹತ್ವದ ನಿರ್ಧಾರವನ್ನು ರೈಲ್ವೇ ಇಲಾಖೆ ತೆಗೆದುಕೊಂಡಿದೆ.

ರೈಲ್ವೇ ಇಲಾಖೆ ಇಜ್ಜತ್ ಯೋಜನೆ ಅಡಿ ಕೂಲಿ, ಕಾರ್ಮಿಕರಿಗೆ ನೀಡುವ ರಿಯಾಯಿತಿ ದರದ ತಿಂಗಳ ಟಿಕೆಟ್ ವಿತರಣೆಗೆ ಸ್ಥಳೀಯ ಶಾಸಕರು ನೀಡುವ ಆದಾಯ ಪ್ರಮಾಣಪತ್ರವನ್ನೂ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ನಿಯಮಾವಳಿ ಐದು ರೀತಿಯ ಪ್ರಮಾಣಪತ್ರಗಳ ಪೈಕಿ ಯಾವುದಾದರೂ ಒಂದನ್ನು ನೀಡಬೇಕಾಗುತ್ತದೆ. ಇದೀಗ ಶಾಸಕರು ನೀಡುವ ಆದಾಯ ಪ್ರಮಾಣಪತ್ರವನ್ನೂ ಪರಿಗಣಿಸಲಾಗುವುದು. ಈ ಹೊಸ ಸೌಲಭ್ಯ ಇದೇ ಜುಲೈ 1ರಿಂದ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನೀಡುವ ಆದಾಯ ಪ್ರಮಾಣ ಪತ್ರ, ಸಂಸದ, ರಾಜ್ಯಸಭಾ ಸದಸ್ಯ, ಕೇಂದ್ರ ಸಚಿವರ ಶಿಫಾರಸು ಪತ್ರ, ಬಿಪಿಎಲ್ ಕಾರ್ಡ್ ಅಥವಾ ಕೇಂದ್ರ ಸರ್ಕಾರ ನೀಡಿದ ಯಾವುದಾದರೂ ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಲಾಗುತಿತ್ತು. ವಿಶೇಷ ಸಂದರ್ಭಗಳಲ್ಲಿ ವಿಭಾಗೀಯ ರೈಲ್ವೆ ಮ್ಯಾನೇಜರ್‌ಗೂ ಆದಾಯ ಪ್ರಮಾಣ ಪತ್ರ ನೀಡುವ ಅಧಿಕಾರ ಇದೆ.

ಶಾಸಕರು ನೀಡುವ ಪ್ರಮಾಣಪತ್ರವನ್ನು ಟಿಕೆಟ್ ವಿತರಿಸುವಾಗ ರೈಲ್ವೆ ಇಲಾಖೆ ತೆಗೆದುಕೊಳ್ಳುತ್ತದೆ. ಮತ್ತೊಂದು ಬಾರಿ ಮತ್ತೆ ಹೊಸದಾಗಿ ಶಾಸಕರ ಪ್ರಮಾಣ ಪತ್ರ ನೀಡಬೇಕಾಗುತ್ತದೆ.

ಇಜ್ಜತ್ ಯೋಜನೆ ಅಡಿ ತಿಂಗಳ ಗರಿಷ್ಠ ವರಮಾನ 1,500 ರೂಪಾಯಿಗಿಂತ ಕಡಿಮೆ ಇರುವ ಕಾರ್ಮಿಕರು ಕೇವಲ 25 ರೂಪಾಯಿ ನೀಡಿ ಒಂದು ತಿಂಗಳ ಅವಧಿಯ ಟಿಕೆಟ್ ಪಡೆಯಬಹುದಾಗಿದೆ. ಟಿಕೆಟ್ ನೀಡಿ ಗರಿಷ್ಠ 100 ಕಿ.ಮೀ ಸಂಚರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.