ಚೆನ್ನೈ (ಪಿಟಿಐ): ಕರ್ನಾಟಕದ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ತಮಿಳುನಾಡಿನ ದಂಪತಿಗೆ ್ಙ19 ಕೋಟಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯೋನ್ಮುಖ ನಟಿ ಲೀನಾ ಮರಿಯಾ ಪೌಲ್ನ ಗೆಳೆಯ ಸುಕೇಶ್ ಚಂದ್ರಶೇಖರ್ನನ್ನು ಪೊಲೀಸರು ಬುಧವಾರ ಚೆನ್ನೈಗೆ ಕರೆತಂದಿದ್ದಾರೆ.
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ನನ್ನು ದೆಹಲಿ ಪೊಲೀಸರ ತಂಡ ಕಳೆದ ವಾರ ಕೋಲ್ಕತ್ತದಲ್ಲಿ ಬಂಧಿಸಿತ್ತು. ಆತನ ವಿರುದ್ಧ ತಮಿಳುನಾಡಿನಲ್ಲಿ ಎಂಟು ಹಾಗೂ ಕರ್ನಾಟಕದಲ್ಲಿ ಆರು, ಕೇರಳ ಮತ್ತು ದೆಹಲಿಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಇನ್ನೂ ಇತ್ಯರ್ಥವಾಗದೇ ಇರುವ ಪ್ರಕರಣಗಳ ತನಿಖೆಗಾಗಿ ಆತನನ್ನು ತಮಿಳುನಾಡು ಪೊಲೀಸರು ಚೆನ್ನೈಗೆ ಕರೆತಂದಿದ್ದಾರೆ.ರೂ 19 ಕೋಟಿ ವಂಚನೆ ಪ್ರಕರಣ ಅಲ್ಲದೇ ಉದ್ಯಮಿಯೊಬ್ಬರಿಗೆ ರೂ 62.47 ಲಕ್ಷ ವಂಚನೆ ಮಾಡಿದ ಪ್ರಕರಣದಲ್ಲೂ ಚಂದ್ರಶೇಖರ್ ಮತ್ತು ಪೌಲ್ ಆರೋಪಿಗಳಾಗಿದ್ದಾರೆ. ನಟಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ತಂತ್ರಜ್ಞಾನದ ಅರಿವಿರುವ ಚಂದ್ರಶೇಖರ್ ಇಂಟರ್ನೆಟ್ ಮತ್ತು ಮೊಬೈಲ್ ಬಳಸಿ ಜನರನ್ನು ವಂಚಿಸುತ್ತಿದ್ದ. ಕರ್ನಾಟಕದ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಯಂತ್ರೋಪಕರಣಗಳ ಪೂರೈಕೆಗೆ ಸರ್ಕಾರದ ಗುತ್ತಿಗೆ ಕೊಡಿಸುವುದಾಗಿ ಚೆನ್ನೈ ದಂಪತಿಯನ್ನು ನಂಬಿಸಿ, ಅವರು ಬ್ಯಾಂಕ್ನಿಂದ ಸಾಲವಾಗಿ ತೆಗೆದುಕೊಂಡಿದ್ದ ರೂ 19.70 ಕೋಟಿಯನ್ನು ಠೇವಣಿ ಇಡುವಂತೆ ಮಾಡಿ, ನಂತರ ಆ ಹಣದೊಂದಿಗೆ ಚಂದ್ರಶೇಖರ್ ಪರಾರಿಯಾಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.