ನವದೆಹಲಿ: ನಾರ್ವೆಯಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ದಂಪತಿ ಪ್ರಕರಣವನ್ನು ಭಾರತ ರಾಜತಾಂತ್ರಿಕ ಮಾರ್ಗದಲ್ಲಿ ಪರಿಹರಿಸಲು ಸಾಧ್ಯವಾಗಬಹುದು ಎಂದು ಸಾಗರೋತ್ತರ ಭಾರತೀಯ ವ್ಯವಹಾರ ಸಚಿವ ವಯಲಾರ್ ರವಿ ಹೇಳಿದರು.
ಶಾಲಾ ವಾಹನದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಮಗನಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದ ಕಾರಣಕ್ಕಾಗಿ ಆಂಧ್ರಪ್ರದೇಶದ ದಂಪತಿಯನ್ನು ಬಂಧಿಸಲಾಗಿತ್ತು.
`ಆದರೆ ಇದು ಖಾಸಗಿ ವ್ಯಕ್ತಿ ಹಾಗೂ ಆ ದೇಶದ ಕಾನೂನಿಗೆ ಸಂಬಂಧಿಸಿದ ವಿಷಯವೇ ಹೊರತು ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ' ಎಂಬ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿಕೆ ಕುರಿತು ಪ್ರಶ್ನಿಸಿದಾಗ, `ಖುರ್ಷಿದ್ ಹೇಳಿದ್ದು ಕಾನೂನು ದೃಷ್ಟಿಯಿಂದ. ಆದರೆ ರಾಜತಾಂತ್ರಿಕವಾಗಿ ನಾವು ಅಲ್ಲಿನ ಸರ್ಕಾರದ ಮೇಲೆ ಪ್ರಭಾವ ಬೀರಬಹುದು. ದಂಪತಿಗೆ ನೆರವು ನೀಡುವಂತೆ ರಾಯಭಾರಿಗೆ ತಿಳಿಸಬಹುದು. ಈ ಬಗ್ಗೆ ನಾರ್ವೆಯಲ್ಲಿನ ಭಾರತೀಯ ರಾಯಭಾರಿಯನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಪ್ರಕರಣ ನಿರ್ವಹಿಸಲು ಹಣದ ನೆರವು ಬೇಕಿದ್ದರೆ ನನ್ನ ಖಾತೆ ಮಂಜೂರು ಮಾಡಲಿದೆ ಎಂಬುದನ್ನು ರಾಯಭಾರಿಗೆ ತಿಳಿಸುತ್ತೇನೆ' ಎಂದು ರವಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.