ಚಂಡೀಗಢ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆ ಡಿಎಲ್ಎಫ್ ನಡುವಿನ ಭೂವ್ಯವಹಾರವನ್ನು ರ್ದ್ದದುಗೊಳಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಹರಿಯಾಣದ ಹಿರಿಯ ಅಧಿಕಾರಿಗಳಿಬ್ಬರು ಪರಸ್ಪರ ವಾಗ್ವಾದಕ್ಕಿಳಿದ ಘಟನೆ ಗುರುವಾರ ನಡೆದಿದೆ.
ಭೂವ್ಯವಹಾರ ರದ್ದುಗೊಳಿಸಿದ ಹಿರಿಯ ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರ ಆದೇಶ ಕೆಲ ನ್ಯೂನತೆಗಳಿಂದ ಕೂಡಿದ್ದು ಇದರಲ್ಲಿ ಏನಾದರೂ ಅನ್ಯಾಯವಾಗಿದ್ದರೆ ಎರಡೂ ಗುಂಪುಗಳು ನ್ಯಾಯಾಲಯದ ಮೊರೆ ಹೋಗಲು ಅವಕಾಶ ನೀಡಬಹುದಿತ್ತು ಎಂದು ಹರಿಯಾಣದ ನಗರ ಯೋಜನೆ ಇಲಾಖೆ ಮಹಾನಿರ್ದೇಶಕ ಟಿ.ಸಿ. ಗುಪ್ತಾ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಕೆ. ಚೌಧರಿ ಅವರಿಗೆ ಬರೆದ ಪತ್ರದಲ್ಲಿ ತಮ್ಮ ವಾದ ಮಂಡಿಸಿದ್ದಾರೆ.
ಚೌಧರಿ ಅವರನ್ನು ಗುರುವಾರ ಭೇಟಿ ಮಾಡಿದ ಗುಪ್ತಾ ತಮ್ಮ ಅಭಿಪ್ರಾಯವನ್ನು ನೇರ, ನಿಷ್ಠುರವಾಗಿ ತಿಳಿಸಿದ್ದಾರೆ. ಆದೇಶ ಹೊರಡಿಸಿದ ನಂತರ ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಲು ಆಗಮಿಸಿದ ಅಶೋಕ ಖೇಮ್ಕಾ ಹಾಗೂ ಗುಪ್ತಾ ನಡುವೆ ವಾಗ್ವಾದ ನಡೆದಿದೆ.
ಮುಖ್ಯ ಕಾರ್ಯದರ್ಶಿ ಜತೆಗೆ ಸುಮಾರು 50 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಖೇಮ್ಕಾ, ಮಾತುಕತೆಯ ವಿವರಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದರು.
ಈ ನಡುವೆ ಖೇಮ್ಕಾ ಅವರು ಹೊರಡಿಸಿದ ಆದೇಶದ ಮೂಲ ಪ್ರತಿ ಮಾಧ್ಯಮಗಳಿಗೆ ತಲುಪಿದ್ದರೂ ತಮ್ಮ ಇಲಾಖೆಗಿನ್ನೂ ತಲುಪಿಲ್ಲ ಎಂದು ಟಿ.ಸಿ. ಗುಪ್ತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.