ADVERTISEMENT

ವಾಲ್ ಮಾರ್ಟ್- ತನಿಖೆಗೆ ಹಿಂಜರಿಕೆ ಇಲ್ಲ: ಸದನದಲ್ಲಿ ಕೇಂದ್ರ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:54 IST
Last Updated 11 ಡಿಸೆಂಬರ್ 2012, 10:54 IST

ನವದೆಹಲಿ (ಪಿಟಿಐ): ವಾಲ್ ಮಾರ್ಟ್ ಲಾಬಿ ಪ್ರಕರಣ ಸಂಸತ್ತಿನಲ್ಲಿ ಮಂಗಳವಾರ ಎರಡನೇ ದಿನವೂ ಪ್ರತಿಧ್ವನಿಸಿದ ಪರಿಣಾಮವಾಗಿ ಭಾರತದಲ್ಲಿ ಕಾಲೂರಲು 'ಚಿಲ್ಲರೆ ದೈತ್ಯ' ವೆಚ್ಚ ಮಾಡಿದ ಹಣಕ್ಕೆ ಸಂಬಂಧಿಸಿದ ವರದಿಗಳ ಬಗ್ಗೆ ತನಿಖೆಗೆ ಆಜ್ಞಾಪಿಸಲು ತನಗೆ ಯಾವುದೇ ಹಿಂಜರಿಕೆಯೂ ಇಲ್ಲ  ಎಂದು ಸರ್ಕಾರ ಘೋಷಿಸಿತು.

'ವಿಚಾರದ ವಾಸ್ತವಾಂಶಗಳನ್ನು ಪಡೆಯುವ ಸಲುವಾಗಿ ತನಿಖೆಗೆ ಆಜ್ಞಾಪಿಸಲು ನಮಗೆ ಯಾವುದೇ ಹಿಂಜರಿಕೆಯೂ ಇಲ್ಲ. ಮುಂದಿನ ಕ್ರಮಗಳ ಬಗ್ಗೆ ನಾವು ಈದಿನವೇ ಪ್ರಕಟಿಸುತ್ತೇವೆ' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ್ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷಗಳನ್ನು ಸಮಾಧಾನ ಪಡಿಸುತ್ತಾ ಹೇಳಿದರು.

'ಸರ್ಕಾರವು ವಾಲ್ ಮಾರ್ಟ್ ಕುರಿತ ವರದಿಗಳನ್ನು ಅತ್ಯಂತ ಕಾಳಜಿಪೂರ್ವಕ ಪರಿಶೀಲಿಸುವುದು' ಎಂದು ಕಮಲನಾಥ್ ಹೇಳಿದರು.

ಭಾರತದ ಮಾರುಕಟ್ಟೆ ಪ್ರವೇಶಿಸಲು ವಾಲ್ ಮಾರ್ಟ್ ಲಾಬಿ ಸಂಸ್ಥೆಗಳನ್ನು ನಿಯೋಜಿಸಿತ್ತು ಮತ್ತು ಅದಕ್ಕಾಗಿ ಭಾರಿ ಪ್ರಮಾಣದಲ್ಲಿ ಹಣ ವಿನಿಯೋಗಿಸಿತ್ತು ಎಂಬ ವರದಿಗಳ ಬಗ್ಗೆ ಕಾಲಮಿತಿಯ ತನಿಖೆ ನಡೆಯಬೇಕು ಎಂದು ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹ ಆಗ್ರಹಿಸುತ್ತಿದ್ದಂತೆಯೇ ಕಮಲನಾಥ್ ಅವರಿಂದ ಮೇಲಿನ ಹೇಳಿಕೆ ಬಂದಿತು.

'ತನಿಖೆ 60 ದಿನಗಳ ಒಳಗೆ ಮುಗಿಯಬೇಕು. ಇದಕ್ಕಾಗಿ ಯಾರಿಗೆ ಲಂಚ ನೀಡಲಾಗಿದೆ? ಯಾರು ಯಾರು ಎಷ್ಟೆಷ್ಟು ಹಣ ಪಡೆದಿದ್ದಾರೆ ಎಂಬುದು ಜನತೆಗೆ ತಿಳಿಯಬೇಕು' ಎಂದು ಸಿನ್ಹ ಆಗ್ರಹಿಸುತ್ತಿದ್ದಂತೆಯೇ ವಿರೋಧ ಪಕ್ಷ ಪೀಠಗಳ ಸದಸ್ಯರ ಕಡೆಯಿಂದ 'ನಾಚಿಕೆಗೇಡು, ನಾಚಿಕೆಗೇಡು' (ಶೇಮ್ ಶೇಮ್) ಎಂಬ ಕೂಗು ಎದ್ದಿತು.

ವಾಲ್ ಮಾರ್ಟ್ ನಲ್ಲಿ ಭಾರಿ ಪ್ರಮಾಣದ ಹಣಕಾಸು ಅಕ್ರಮಗಳು ನಡೆದಿದ್ದು, ಭಾರತದಲ್ಲಿನ ವಾಲ್ ಮಾರ್ಟ್ ಮುಖ್ಯಸ್ಥರನ್ನು ಅಮಾನತುಗೊಳಿಸಲಾಗಿದೆ. ಅದರ ಏಳುಮಂದಿ ಅಧಿಕಾರಿಗಳ ವಿರುದ್ಧ ಅಮೆರಿಕದಲ್ಲಿ ತನಿಖೆ ನಡೆಯುತ್ತಿದೆ. ಈ ಘಟನೆ ರಾಷ್ಟದ ಘನತೆಗೆ ಧಕ್ಕೆ ತಂದಿದೆ' ಎಂದು ಸಿನ್ಹ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.