ADVERTISEMENT

ವಿಶ್ವಾಸಮತ ಗೆದ್ದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 10:32 IST
Last Updated 4 ಜನವರಿ 2014, 10:32 IST

ನವದೆಹಲಿ (ಪಿಟಿಐ): ದೆಹಲಿ ವಿಧಾನಸಭೆಯಲ್ಲಿ ಅಲ್ಪಸಂಖ್ಯಾತ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ,   ಜೆಡಿಯು ಹಾಗೂ ಓರ್ವ ಸ್ವತಂತ್ರ ಸದಸ್ಯ ಹಾಗೂ ಕಾಂಗ್ರೆಸ್ ಸದಸ್ಯರ ಬಲದಿಂದ ಗುರುವಾರ ಮೊದಲ ‘ಅಡ್ಡಿ’ಯನ್ನು ಸುಗಮವಾಗಿ ದಾಟಿದೆ.

ಲೋಕೋಪಯೋಗಿ ಸಚಿವ ಮನಿಷ್ ಸಿಸೋಡಿಯಾ ಅವರು ವಿಶ್ವಾಸ ಮತಯಾಚನೆ ಪ್ರಸ್ತಾಪವನ್ನು ಮಂಡಿಸಿದರು. ಸುದೀರ್ಘ ನಾಲ್ಕೂವರೆ ಗಂಟೆಗಳ ಚರ್ಚೆಯ ಕೊನೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘ನೀವು ಬೆಂಬಲ ಯಾರಿಗೆ’ ಎಂಬುದನ್ನು ನಿರ್ಧರಿಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.

‘ನಾನು ಮೂರು ವಿಷಯಗಳನ್ನು ಪ್ರಸ್ತುತ ಪಡಿಸ ಬಯಸುವೆ. ರಾಷ್ಟ್ರೀಯ ಪಕ್ಷಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ದೇಶಕ್ಕೆ ತಿಳಿಸುವ ನಿಟ್ಟಿನಲ್ಲಿ
ದೆಹಲಿಯ ಎಎಪಿ ಪಕ್ಷ ನೇತೃತ್ವವಹಿಸಿಕೊಂಡಿದೆ. ರಾಜಕೀಯದಲ್ಲಿ ಸತ್ಯ ಮತ್ತು ಪ್ರಮಾಣಿಕತೆಯ ಹೋರಾಟದಲ್ಲಿ ಅವರು ಯಾವ ಕಡೆಗಿದ್ದಾರೆ ಹಾಗೂ ಅವರ ಇದರಲ್ಲಿ ಭಾಗಿಯಾಗುತ್ತಾರೆಯೇ’ ಎಂಬುದನ್ನೂ ಕೂಡ ನಿರ್ಧರಿಸಿ’ ಎಂದು 25 ನಿಮಿಷಗಳ ತಮ್ಮ ಭಾಷಣದಲ್ಲಿ ಕೇಜ್ರಿವಾಲ್ ಮನವಿ ಮಾಡಿದರು.

ADVERTISEMENT

ತಮ್ಮ ಸರ್ಕಾರ ಸೇರಿದಂತೆ ಹಿಂದಿನ ಕಾಂಗ್ರೆಸ್ ಸರ್ಕಾರ, ಬಿಜೆಪಿ ನಿಯಂತ್ರಣದ ದೆಹಲಿ ಮಹಾನಗರ ಪಾಲಿಕೆ ಯಾವುದೇ ಆದರೂ ಭ್ರಷ್ಟರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ‘ತಮ್ಮ ಪಕ್ಷ ಅಥವಾ ಸರ್ಕಾರಕ್ಕೆ ಅಲ್ಲ; ಬದಲಾಗಿ ದೆಹಲಿ ಎದುರಿಸುತ್ತಿರುವ ಸಮಸ್ಯೆಗಳಿಗಾಗಿ ಬೆಂಬಲ ಕೋರುತ್ತಿರುವೆ’ ಎಂದು ನುಡಿದರು.

ಚರ್ಚೆಯ ಕೊನೆಯಲ್ಲಿ ಹಂಗಾಮಿ ಸ್ಪೀಕರ್ ಮತಿನ್ ಅಹ್ಮದ್ ಅವರು ಗೊತ್ತುವಳಿಯ ಪರವಾಗಿ ಇರುವವರು ಎದ್ದು ನಿಲ್ಲುವಂತೆ ಕೋರಿದರು.

ಬಳಿಕ ಗೊತ್ತುವಳಿ ಪಾಸ್ ಆಗಿದೆ ಎಂದು ಪ್ರಕಟಿಸಿದ ಅಹ್ಮದ್, ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಶುಭಾಷಯ ತಿಳಿಸಿ ಸದನವನ್ನು ಮುಂದೂಡಿದರು.

ಎಎಪಿಯ 28, ಕಾಂಗ್ರೆಸ್ಸಿನ ಏಳು ಮತ್ತು ತಲಾ ಒಬ್ಬ ಜೆಡಿಯು ಹಾಗೂ ಸ್ವತಂತ್ರ ಸದಸ್ಯರು ಗೊತ್ತುವಳಿಯ ಪರವಾಗಿ ಎದ್ದುನಿಂತರು. ಉಳಿದಂತೆ ಬಿಜೆಪಿಯ 31 ಸದಸ್ಯ ಹಾಗೂ ಅದರ ಅಂಗಪಕ್ಷದ ಅಕಾಲಿದಳದ ಒಬ್ಬ ಸದಸ್ಯರು ಗೊತ್ತುವಳಿಯ ವಿರುದ್ಧ ಮತ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.