ನವದೆಹಲಿ: ‘ಸದ್ಯದ ಪರಿಸ್ಥಿತಿಯಲ್ಲಿ ಅಸಹಾಯಕನಾಗಿದ್ದು ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಬೇರೆ ಕೆಲಸ ಹುಡುಕಿಕೊಳ್ಳಿ’ ಎಂದು ಕಂಪೆನಿಯ ಉದ್ಯೋಗಿಗಳಿಗೆ ಪಿಎನ್ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ತಿಳಿಸಿದ್ದಾರೆ.
ಚೋಕ್ಸಿ ಪರ ವಕೀಲ ಸಂಜಯ್ ಅಬೊಟ್ ಬಿಡುಗಡೆ ಮಾಡಿರುವ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಚೋಕ್ಸಿ ಅವರ ‘ಗೀತಾಂಜಲಿ ಜೆಮ್ಸ್’ ಕಂಪೆನಿಯಲ್ಲಿ 3,500 ಉದ್ಯೋಗಿಗಳಿದ್ದಾರೆ.
‘ಹಲವು ತನಿಖಾ ಸಂಸ್ಥೆಗಳು, ಸರ್ಕಾರಿ ಏಜೆನ್ಸಿಗಳು ಏಕಕಾಲದಲ್ಲಿ ತನಿಖೆ ನಡೆಸುತ್ತಿರುವುದರಿಂದ ಮತ್ತು ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿರುವುದರಿಂದ ಕಂಪೆನಿಯ ಕೆಲಸಕಾರ್ಯಗಳು ಸ್ಥಗಿತಗೊಂಡಿವೆ.’ ಎಂದು ಪತ್ರದಲ್ಲಿ ಚೋಕ್ಸಿ ಹೇಳಿಕೊಂಡಿದ್ದಾರೆ.
‘ನನ್ನ ವಿಧಿಯನ್ನು ನಾನು ಎದುರಿಸುತ್ತೇನೆ. ನಾನ್ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ಕೊನೆಗೆ ಸತ್ಯ ಹೊರಬರಲಿದೆ’ ಎಂದು ಚೋಕ್ಸಿ ಹೇಳಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.