ನವದೆಹಲಿ: ಹಠಾತ್ ಎದುರಾಗುವ ‘ಅಲ್ಪಾವಧಿಯ ಹಾಗೂ ತೀವ್ರವಾದ ಯುದ್ಧ’ಕ್ಕೆ ಸಿದ್ಧವಾಗಿರಲು ತುರ್ತಾಗಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಸಲು ಸರ್ಕಾರ ಸೇನೆಗೆ ಅಧಿಕಾರ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಕ್ಕಿಂ ಗಡಿ ಪ್ರದೇಶದಲ್ಲಿ ಚೀನಾದೊಂದಿಗೆ ಉಂಟಾಗಿರುವ ಬಿಕ್ಕಟ್ಟು, ಪಾಕಿಸ್ತಾನದ ಜತೆಗಿನ ಗಡಿ ಸಮಸ್ಯೆ, ಗಡಿ ನಿಯಂತ್ರಣ ರೇಖೆ ಬಳಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ 10–15 ದಿನಗಳ ತೀವ್ರ ಯುದ್ಧಕ್ಕೆ ಭಾರತೀಯ ಸೇನೆ ಸಿದ್ಧವಾಗಿರಬೇಕಿದೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ನಡೆಸಲಾದ ಆಂತರಿಕ ತನಿಖೆಯಲ್ಲಿ ಸೇನೆಯು ಶಸ್ತ್ರಾಸ್ತ್ರಗಳ ಕೊರತೆಯ ಸಮಸ್ಯೆ ಎದುರಿಸುತ್ತಿರುವುದು ಬೆಳಕಿಗೆ ಬಂದಿತ್ತು. ದಾಳಿಯಲ್ಲಿ 19 ಯೋಧರು ಮೃತಪಟ್ಟಿದ್ದರು. ಫಿರಂಗಿದಳದ ಸಾಮಗ್ರಿ, ಟ್ಯಾಂಕ್ ಶೆಲ್ಗಳು ಮತ್ತು ಶಸ್ತ್ರಾಸ್ತ್ರಗಳ ಭಾರಿ ಕೊರತೆ ಇರುವುದು ತಿಳಿದುಬಂದಿತ್ತು.
ಯುದ್ಧ ವಾಹನಗಳೂ ಸೇರಿದಂತೆ ಸುಮಾರು 46 ಮಾದರಿಯ ಶಸ್ತ್ರಾಸ್ತ್ರಗಳ ಕೊರತೆ ಇರುವುದಾಗಿ ಸೇನೆ ಗುರುತಿಸಿದೆ. ಈ ಶಸ್ತ್ರಾಸ್ತ್ರಗಳನ್ನು ತುರ್ತು ಖರೀದಿ ನೀತಿ ಅನ್ವಯ ಖರೀದಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.