ADVERTISEMENT

ಸಕಲರ ಜೊತೆ ಚರ್ಚಿಸಿಯೇ ರಾಷ್ಟ್ರಪತಿ ಅಭ್ಯರ್ಥಿ ಹೆಸರು ಅಂತಿಮ: ಗಡ್ಕರಿ

​ಪ್ರಜಾವಾಣಿ ವಾರ್ತೆ
Published 2 ಮೇ 2012, 9:30 IST
Last Updated 2 ಮೇ 2012, 9:30 IST

ಇಂದೋರ್ (ಪಿಟಿಐ): ರಾಷ್ಟ್ರಪತಿ ಅಭ್ಯರ್ಥಿಯ ಬಗ್ಗೆ ಎನ್ ಡಿ ಎ ಮೈತ್ರಿಕೂಟದಲ್ಲಿ ಬಿರುಕುಗಳು ಉಂಟಾಗಿರುವ ಬಗೆಗಿನ ವರದಿಗಳ ಬೆನ್ನಲ್ಲೇ ಎನ್ ಡಿ ಎ ನಾಯಕರು ಮತ್ತು ಸಣ್ಣ ಪಕ್ಷಗಳ ಜೊತೆ ಸಮಾಲೋಚಿಸಿ ರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಬುಧವಾರ ಇಲ್ಲಿ ಸ್ಪಷ್ಟ ಪಡಿಸಿದರು.

ಇಂದೋರ್ ಪ್ರಸ್ ಕ್ಲಬ್ ನಲ್ಲಿ ಮಾತನಾಡುತ್ತಿದ್ದ ಬಿಜೆಪಿ ನಾಯಕ ~ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಮುನ್ನ ಎನ್ ಡಿಎ ನಾಯಕರ ಜೊತೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಸಮಾಲೋಚಿಸಲಾಗುವುದು~ ಎಂದು ಹೇಳಿದರು.

~ಪ್ರಾದೇಶಿಕ ಪಕ್ಷಗಳು ಹಾಲಿ ಪರಿಸ್ಥಿತಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮಹತ್ವ ಪಡೆದುಕೊಂಡಿರುವುದರಿಂದ ಸಣ್ಣ ಪಕ್ಷಗಳ ಜೊತೆಗೂ ಮಾತುಕತೆ ನಡೆಸಲಾಗುವುದು~ ಎಂದು ಅವರು ನುಡಿದರು.

ಹಾಲಿ ಯುಪಿಎ ಮೈತ್ರಿಕೂಟದ ಅಂಗ ಪಕ್ಷಗಳಾಗಿರುವ ಕೆಲವು ರಾಜಕೀಯ ಪಕ್ಷಗಳ ಜೊತೆಗೆ ಸಹಮತ ಸಾಧಿಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಸಮಾಜವಾದಿ ಪಕ್ಷದಂತಹ ಪಕ್ಷ ಸೂಚಿಸಿದರೆ ಅವರನ್ನು ಬೆಂಬಲಿಸುವ ಸಾಧ್ಯತೆಗಳನ್ನು ಪಕ್ಷವು ಮುಕ್ತವಾಗಿ ಇರಿಸಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಸುಷ್ಮಾ ಸ್ವರಾಜ್ ಇತ್ತೀಚೆಗೆ ಹೇಳಿದ್ದರು.

ಸುಷ್ಮಾ ಹೇಳಿಕೆ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ ಗಡ್ಕರಿ ಅವರು ~ಸುಷ್ಮಾ ಅವರು ಉನ್ನತ ಹುದ್ದೆಗೆ ಮುಂದೆ ಬರುತ್ತಿರುವ ಕೆಲವು ಉತ್ತಮ ಹೆಸರುಗಳಲ್ಲಿ ಕಲಾಂ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆದರೆ ಇದರ ಅರ್ಥ ಬಿಜೆಪಿಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಲ್ಲ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.