ತಿರುವನಂತಪುರ (ಪಿಟಿಐ): ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಮೇಲೆ ಇಲ್ಲಿಯ ಹಿನ್ನೀರು ಪ್ರದೇಶದ ದ್ವೀಪದಲ್ಲಿರುವ ರೆಸಾರ್ಟ್ನಲ್ಲಿ ಅತ್ಯಾಚಾರ ನಡೆದಿದೆ. ಈ ಕೃತ್ಯದಲ್ಲಿ ಪಾಲ್ಗೊಂಡ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಶೋಧ
ನಡೆಸುತ್ತಿದ್ದಾರೆ.
ತನ್ನ ಸಹೋದ್ಯೋಗಿಗಳೊಂದಿಗೆ ಇಲ್ಲಿಗೆ ಸಮೀಪದ ಪೊಳಿಯೂರಿನಲ್ಲಿರುವ ರೆಸಾರ್ಟ್ನಲ್ಲಿ ತಂಗಿದ್ದ ಮಹಿಳೆಯ ಮೇಲೆ ನ. 28 ರಂದು ಇಬ್ಬರು ವ್ಯಕ್ತಿಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಇಬ್ಬರು ಅಪರಿಚಿತ ವ್ಯಕ್ತಿಗಳು ಬೆಳಗಿನ ಜಾವ 2.30ಗಂಟೆ ಸುಮಾರಿಗೆ ನಾನು ತಂಗಿದ್ದ ಕೋಣೆ ಪ್ರವೇಶ ಮಾಡಿ ಅತ್ಯಾಚಾರ ನಡೆಸಿದ್ದಾರೆ’ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಈ ಹೇಳಿಕೆ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಸಾರ್ಟ್ ಕೋಣೆಯಿಂದ ವಿಧಿ ವಿಜ್ಞಾನ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿ, ಪರಿಶೀಲನೆಗೆ ಕಳುಹಿಸಿದ್ದಾರೆ. ಆ ಸಂದರ್ಭದಲ್ಲಿ ರೆಸಾರ್ಟ್ನಲ್ಲಿ ತಂಗಿದ್ದ ಅತಿಥಿಗಳ ದೂರವಾಣಿ ಕರೆಯ ವಿವರಗಳನ್ನು ಸಂಗ್ರಹಿಸಿರುವ ಪೊಲೀಸರು ಅಲ್ಲಿಯ ಸಿಬ್ಬಂದಿಯನ್ನೂ ವಿಚಾರಿಸಿದ್ದಾರೆ ಎಂದು ತನಿಖಾ ತಂಡದಲ್ಲಿರುವ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ತನಿಖೆಗೆ ಆಗ್ರಹ: ಘಟನೆಯ ಕುರಿತು ಕ್ರಿಮಿನಲ್ ವಿಚಾರಣೆ ನಡೆಸಬೇಕು ಎಂದು ಸಿಪಿಐ (ಎಂ) ನಾಯಕ ವಿ.ಎಸ್.ಅಚ್ಚುತಾನಂದನ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.