ADVERTISEMENT

ಸಿಥೇರಿ ರೈಲು ದುರಂತ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:40 IST
Last Updated 14 ಸೆಪ್ಟೆಂಬರ್ 2011, 9:40 IST

ನವದೆಹಲಿ (ಪಿಟಿಐ): ತಮಿಳುನಾಡಿನ ಸಿಥೇರಿಯಲ್ಲಿ 10 ಮಂದಿಯನ್ನು ಬಲಿ ತೆಗೆದುಕೊಂಡ ರೈಲು ಅಪಘಾತದ ಬಗ್ಗೆ ತನಿಖೆ ನಡೆಸುವಂತೆ ರೈಲ್ವೆ ಇಲಾಖೆ ಬುಧವಾರ ಆಜ್ಞಾಪಿಸಿದೆ.

ದಕ್ಷಿಣ ವಲಯದ ರೈಲ್ವೆ ಸುರಕ್ಷಾ ಕಮಿಷನರ್ ಅವರು ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಿ ಆದಷ್ಟೂ ಶೀಘ್ರ ವರದಿ ಸಲ್ಲಿಸುವರು ಎಂದು ರೈಲ್ವೆ ಸಚಿವಾಲಯ ವಕ್ತಾರ ಅನಿಲ್ ಕುಮಾರ ಸಕ್ಸೇನಾ ಇಲ್ಲಿ ಹೇಳಿದರು.

ಸಂಕೇತವನ್ನು ನಿರ್ಲಕ್ಷಿಸಿದ್ದು ಮತ್ತು ವೇಗಮಿತಿಯನ್ನು ಪಾಲಿಸದೇ ಇದ್ದುದು ಅಪಘಾತಕ್ಕೆ ಕಾರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅವರು ನುಡಿದರು.

ಚೆನ್ನೈಯಿಂದ 90 ಕಿ.ಮೀ. ದೂರದ ಸಿಥೇರಿಯಲ್ಲಿ ಸಂಕೇತಕ್ಕಾಗಿ ಕಾಯುತ್ತಿದ್ದ ಅರಕ್ಕೋಣಂ- ಕಟ್ಪಾಡಿ ಪ್ಯಾಸೆಂಜರ್ ರೈಲುಗಾಡಿಗೆ ಹಿಂದಿನಿಂದ ಬಂದ ಚೆನ್ನೈ ಕರಾವಳಿ- ವೆಲ್ಲೋರ್ ಕಂಟೋನ್ಮೆಂಟ್ ಮೈನ್ ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಎಂಇಎಂಯು) ರೈಲುಗಾಡಿ ಡಿಕ್ಕಿ ಹೊಡೆದ ಪರಿಣಾಮವಾಗಿ ಮಂಗಳವಾರ ರಾತ್ರಿ 9.40 ಗಂಟೆಗೆ ಈ ಅಪಘಾತ ಸಂಭವಿಸಿತ್ತು.

ಅಪಘಾತದಲ್ಲಿ 10 ಜನ ಮೃತರಾಗಿ 72 ಜನ ಗಾಯಗೊಂಡಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.