ರಾಯಪುರ: ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ನಕ್ಸಲರು ಸೋಮವಾರ ನಡೆಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಹೊರಟಿದ್ದ ಯೋಧರ ಬಸ್ ಮೇಲೆ ಛತ್ತೀಸಗಡದ ಬಿಜಾಪುರದಲ್ಲಿ ದಾಳಿ ನಡೆದಿದೆ. ಬಸ್ನಲ್ಲಿ 30 ಯೋಧರು ಇದ್ದರು. ಸ್ಫೋಟಕ್ಕೆ ಕಚ್ಚಾ ಬಾಂಬ್ ಬಳಸಲಾಗಿದೆ.
ಇದು ಸೋಮವಾರ ನಡೆದ ಎರಡನೇ ದಾಳಿ ಆಗಿದೆ. ಬಿಜಾಪುರ–ಭೋಪಾಲ್ಪಟ್ನಂ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮೇಲೆ ನಕ್ಸಲರು ಬೆಳಿಗ್ಗೆ ಎರಡು ಬಾಂಬ್ ದಾಳಿ ನಡೆಸಿದ್ದರು. ನಂತರ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿಗೆ ಭೇಟಿ ನೀಡಲಿರುವ ಕಾರಣ ಈ ಸರಣಿ ಸ್ಫೋಟ ಆತಂಕ ಸೃಷ್ಟಿಸಿದೆ. ನಕ್ಸಲರಿಗಾಗಿ ಭದ್ರತಾ ಪಡೆ ಕಾಡಿನಲ್ಲಿ ಶೋಧ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.