ADVERTISEMENT

ಹಜಾರೆಗೆ ಗ್ರಾಮಸ್ಥರಿಂದ ಮಹಾತ್ಮ ಬಿರುದು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:40 IST
Last Updated 3 ಅಕ್ಟೋಬರ್ 2011, 19:40 IST

ಅಹಮದ್‌ನಗರ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹುಟ್ಟೂರಾದ ರಾಳೇಗಣ ಸಿದ್ಧಿಯ ಗ್ರಾಮವು ಅಣ್ಣಾಗೆ `ಮಹಾತ್ಮ~ ಎಂಬ ಬಿರುದು ನೀಡುವ ಬಗ್ಗೆ  ನಿರ್ಣಯ ಕೈಗೊಂಡಿದೆ. ಆದರೆ ಗಾಂಧಿವಾದಿ ಗ್ರಾಮಸ್ಥರ ನಿರ್ಣಯವನ್ನು ತಿರಸ್ಕರಿಸಿದ್ದು, ತಮ್ಮನ್ನು ಯಾವುದೇ ರೀತಿಯಲ್ಲೂ ಮಹಾತ್ಮ ಗಾಂಧಿ ಅವರೊಂದಿಗೆ ಹೋಲಿಕೆ ಮಾಡುವುದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಅಣ್ಣಾ ಹಜಾರೆ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಮಹಾತ್ಮ ಬಿರುದು ನೀಡುವ ನಿರ್ಣಯವನ್ನು ಗಾಂಧೀಜಿ ಅವರ 142ನೇ ಜನ್ಮ ದಿನವಾದ ಭಾನುವಾರ ಮಹಾರಾಷ್ಟ್ರದಲ್ಲಿರುವ ರಾಳೇಗಣ ಸಿದ್ಧಿ ಗ್ರಾಮ ಸಭೆಯು ತೆಗೆದುಕೊಂಡಿತ್ತು. ಆದರೆ ಗ್ರಾಮಸಭೆಯ ನಿರ್ಣಯವನ್ನು ಅಣ್ಣಾ ಹಜಾರೆ ತಿರಸ್ಕರಿಸಿದ್ದಾರೆ.

`ನಾನೊಬ್ಬ ಸರಳ ಭಾರತೀಯನಾಗಿದ್ದು, ಗಾಂಧೀಜಿ, ಪುಲೆ, ಅಂಬೇಡ್ಕರ್ ಮತ್ತಿತರ ಶ್ರೇಷ್ಠರು ತೋರಿಸಿರುವ ಹಾದಿಯಲ್ಲಿ ನಡೆಯಲು ಯತ್ನಿಸುತ್ತಿದ್ದೇನೆ. ಈ ಮಹಾತ್ಮರ ನೈತಿಕತೆ ಮತ್ತು ಮೌಲ್ಯಗಳನ್ನು ಪಾಲಿಸಲು ಜನರು ಯತ್ನಿಸಬೇಕು~ ಎಂದು ಅವರು ಹೇಳಿದ್ದಾರೆ.

ತಮ್ಮನ್ನು ಮಹಾತ್ಮ ಎಂದು ಕರೆಯಬಾರದು ಎಂದು ಅವರು ರಾಳೇಗಣ ಸಿದ್ಧಿ ಜನತೆಯನ್ನು ಕೋರಿದ್ದಾರೆ. ಹಾಗೆ ಕರೆದು ದೈತ್ಯಕ್ಕೆ ಏರಿಸುವುದರಿಂದ ದೇಶದ ಸಾಮಾನ್ಯ ನಾಗರಿಕನಾಗಿ ಕರ್ತವ್ಯ ನಿರ್ವಹಿಸಲು ತಮಗೆ ಸಾಧ್ಯವಿಲ್ಲ ಎಂದೂ ಅಣ್ಣಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.