ADVERTISEMENT

ಹುತಾತ್ಮ ಯೋಧನ ಪತ್ನಿಗೂ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಮಥುರಾ (ಪಿಟಿಐ): ಇತ್ತೀಚೆಗೆ ಪಾಕ್ ಪಡೆಗಳಿಂದ ಅಮಾನುಷವಾಗಿ ಹತ್ಯೆಗೀಡಾದ ಯೋಧ ಲಾನ್ಸ್ ನಾಯಕ್ ಹೇಮರಾಜ್ ಅವರ ಪತ್ನಿಗೆ ಕಿಡಿಗೇಡಿಯೊಬ್ಬ 10 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೋಶಿ ಪಟ್ಟಣದ ಹೊರವಲಯದ ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ತನ್ನ ಹೆಸರು ಅಮಿತ್‌ಕುಮಾರ್, ತಾನು ಸೇನಾ ಕೇಂದ್ರ ಕಚೇರಿಯಿಂದ ಬಂದ ಅಧಿಕಾರಿ ಎಂದು ಹೇಳಿಕೊಂಡು ಬಂದ ಈ ವಂಚಕ, ಶುಕ್ರವಾರ ಬೆಳಿಗ್ಗೆ  ಶೇರ್‌ನಗರ ಗ್ರಾಮದಲ್ಲಿ ಹೇಮರಾಜ್ ಅವರ ಪತ್ನಿ ಧರ್ಮವತಿ ಅವರನ್ನು ಭೇಟಿ ಮಾಡಿದ. ಸರ್ಕಾರ ನೀಡಿದ ಪರಿಹಾರದ ಹಣವನ್ನು ಸುರಕ್ಷತೆ ದೃಷ್ಟಿಯಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಸಲಹೆ ನೀಡಿದ.

ಇದನ್ನು ನಂಬಿದ ಧರ್ಮವತಿ ಅವರು ಎಸ್‌ಬಿಐ ಶಾಖೆಯಿಂದ 20 ಲಕ್ಷ ವಾಪಸ್ ಪಡೆದು ಮಗಳ ಹೆಸರಿನಲ್ಲಿ 10 ಲಕ್ಷ ರೂಪಾಯಿ ಠೇವಣಿ ಮಾಡಿದರು. ಇನ್ನುಳಿದ 10 ಲಕ್ಷ ರೂಪಾಯಿಯನ್ನು ಬೇರೆ ಬ್ಯಾಂಕ್‌ನಲ್ಲಿ ಇಡಲು ಈ ಅಪರಿಚಿತ `ವಂಚಕನ' ಕೈಗೆ ಕೊಟ್ಟರು. ಆತ ತನ್ನ ಬೈಕ್‌ನಲ್ಲಿಯೇ ಧರ್ಮವತಿ ಅವರನ್ನು ಹತ್ತಿಸಿಕೊಂಡು ಹೊರಟ. ಧರ್ಮವತಿ ಅವರ ಮೈದುನ  ಹಾಗೂ ಸಂಬಂಧಿಯೊಬ್ಬರು ಮತ್ತೊಂದು ಬೈಕ್‌ನಲ್ಲಿ ಇವರನ್ನು ಹಿಂಬಾಲಿಸಿದರು. ಆದರೂ, ಮಾರ್ಗಮಧ್ಯೆ ಪೆಟ್ರೋಲ್ ತುಂಬಿಸಿಕೊಳ್ಳುವುದಾಗಿ ಈತ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ಹಣದೊಂದಿಗೆ ಪರಾರಿಯಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.