ಹೈದರಾಬಾದ್ (ಪಿಟಿಐ): ತಮ್ಮ ಇಚ್ಛೆಗೆ ವಿರುದ್ಧವಾಗಿ ಅನ್ಯ ಸಮುದಾಯದ ವ್ಯಕ್ತಿಯೊಬ್ಬರನ್ನು ಮದುವೆಯಾದ ಮಗಳನ್ನು ಹತ್ಯೆ ಮಾಡಿದ್ದಾರೆ ಎನ್ನಲಾದ ತಂದೆ–ತಾಯಿಯನ್ನು ಆಂಧ್ರ ಪ್ರದೇಶದ ಗುಂಟೂರ್ ಜಿಲ್ಲೆಯಲ್ಲಿ ಸೋಮವಾರ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಪಿ.ಹರಿ ಬಾಬು ಹಾಗೂ ಸಾಮ್ರಾಜ್ಯಂ ಎಂಬುವರು ತಮ್ಮ ಮಗಳಾದ ಪಿ.ದೀಪ್ತಿ ಅವರನ್ನು ಗುಂಟೂರಿನಲ್ಲಿರುವ ನಿವಾಸದಲ್ಲಿ ಭಾನುವಾರ ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದ್ದು, ಘಟನೆಯ ಬಳಿಕ ಅವರು ತಲೆಮರಿಸಿಕೊಂಡಿದ್ದರು. ಅವರನ್ನು ಸಮೀಪದ ಹಳ್ಳಿಯೊಂದರಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ (ಗುಂಟೂರ್ ನಗರ) ಗೋಪಿನಾಥ್ ಜಟ್ಟಿ ಸುದ್ದಿ ಸಂಸ್ಥೆ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಅಲ್ಲದೇ, ‘ಅವರಿಬ್ಬರೂ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ. ಸಾಫ್ಟವೇರ್ ಎಂಜಿನಿಯರ್ ಆಗಿದ್ದ ದೀಪ್ತಿ, ಹೈದರಾಬಾದ್ನಲ್ಲಿರುವ ಐಟಿ ಕಂಪೆನಿಯೊಂದರಲ್ಲಿ 2010ರಿಂದ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ, ಸಹೋದ್ಯೋಗಿ ಕಿರಣ್ಕುಮಾರ್ ಜೊತೆಗೆ ಪ್ರೇಮಾಂಕುರವಾಗಿತ್ತು.
ಆದರೆ, ಈ ಸಂಬಂಧಕ್ಕೆ ಹೆತ್ತವರ ವಿರೋಧವಿತ್ತು ಎಂದು ಪೊಲಿಸರು ತಿಳಿಸಿದ್ದಾರೆ. ತಂದೆ–ತಾಯಿಗಳ ವಿರೋಧ ಲೆಕ್ಕಿಸದೇ ಮುಂದುವರಿದ ದೀಪ್ತಿ ಅವರು ಮಾರ್ಚ್ 21ರಂದು ಆರ್ಯ ಸಮಾಜ ದೇವಸ್ಥಾನದಲ್ಲಿ ಕಿರಣ್ ಅವರೊಂದಿಗೆ ವಿವಾಹವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.