ನವದೆಹಲಿ (ಪಿಟಿಐ): ಅಪರಾಧ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಳ್ಳುವುದನ್ನು ನ್ಯಾಯದಾನ ವ್ಯವಸ್ಥೆಯ ವೈಫಲ್ಯ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಕಳಪೆ ತನಿಖೆಯಿಂದಾಗಿ ಆರೋಪಿಗಳು ಖುಲಾಸೆಗೊಳ್ಳುವ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ನ್ಯಾಯಮೂರ್ತಿಗಳಾದ ಸಿ.ಕೆ. ಪ್ರಸಾದ್ ಮತ್ತು ಜೆ.ಎಸ್. ಖೇಹರ್ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿದೆ.
ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದ ರೀತಿಯಲ್ಲಿ ತನಿಖೆ ನಡೆಸುವುದಕ್ಕೆ 6 ತಿಂಗಳೊಳಗೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ರಾಜ್ಯಗಳಿಗೆ ಪೀಠ ನಿರ್ದೇಶನ ನೀಡಿದೆ.
ಆರೋಪಿಗಳು ಖುಲಾಸೆಗೊಳ್ಳುವ ಪ್ರತಿಯೊಂದು ಪ್ರಕರಣವನ್ನೂ ಪರಿಶೀಲನೆಗೆ ಒಳಪಡಿಸಬೇಕು. ಖುಲಾಸೆಗೆ ಕಾರಣವಾದ ತನಿಖಾಧಿಕಾರಿ ಅಥವಾ ವಿಚಾರಣಾಧಿಕಾರಿಗಳನ್ನು ಗುರುತಿಸ ಬೇಕು. ತಪ್ಪು ಮಾಡಿರುವ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.