ಕೋಲ್ಕತ್ತ (ಪಿಟಿಐ): ಶಬರಿಮಲೆ ಕಾಲ್ತುಳಿತ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸುಮಾರು 142 ಯಾತ್ರಿಗಳು ಅದೃಷ್ಟವಶಾತ್ ಪಾರಾಗಿದ್ದಾರೆ.ಯಾತ್ರಿಗಳನ್ನು 120 ಮತ್ತು 20 ಸದಸ್ಯರನ್ನು ಒಳಗೊಂಡ ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ಹಿರಿಯ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಗಾಗಿ ಬೆಟ್ಟವನ್ನು ಏರದೆ ಇರಲು ನಿರ್ಧಾರ ಕೈಗೊಳ್ಳಲಾಗಿತ್ತು.
ಜ. 14ರ ರಾತ್ರಿ ಆಗಸದಲ್ಲಿ ಜ್ಯೋತಿಯನ್ನು ನೋಡಲು ತೀರ್ಮಾನಿಸಿದ ಯಾತ್ರಿಗಳು ಬೆಟ್ಟದ ಬುಡದಲ್ಲೇ ಪಂಪಾ ನದಿ ಬಳಿ ಉಳಿದುಕೊಂಡಿದ್ದರು. ಇದು ಅವರ ಜೀವ ಉಳಿಸಿದೆ. ಭಾನುವಾರ ಅವರು ಅಲ್ಲಿಂದ ಪಾಲಕ್ಕಾಡ್ಗೆ ಪಯಣಿಸಿದ್ದಾರೆ ಎಂದು ಅವರೊಂದಿಗೆ ಸಂಪರ್ಕದಲ್ಲಿರುವ ರಾಮಕೃಷ್ಣನ್ ಕುಮಾರ್ ಎಂಬುವರು ಹೇಳಿದ್ದಾರೆ.
ರಾಹುಲ್ ಭೇಟಿಗೆ ಪ್ರತಿಕೂಲ ಹವಾಮಾನ ಅಡ್ಡಿ: ಕೊಚ್ಚಿ (ಪಿಟಿಐ): ಕಾಲ್ತುಳಿತದಿಂದ 102 ಮಂದಿ ಅಯ್ಯಪ್ಪಸ್ವಾಮಿ ಭಕ್ತರು ಸಾವಿಗೀಡಾದ ಕೇರಳದ ವಂಡಿಪೆರಿಯಾರ್ ಪ್ರದೇಶಕ್ಕೆ ಭೇಟಿ ನೀಡುವ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಅವರ ಉದ್ದೇಶಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ರಾಹುಲ್ ಹಾಗೂ ಇತರರು ಇದ್ದ ಹೆಲಿಕಾಪ್ಟರ್ ಇಳಿಸಲು ಮಂದ ಬೆಳಕು ಮತ್ತು ಮಳೆ ಅಡ್ಡಿಯಾಗಿದ್ದರಿಂದ ಅವರೆಲ್ಲ ಹಿಂದಿರುಗಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.