ನವದೆಹಲಿ, (ಪಿಟಿಐ): ಕೇಂದ್ರದ ದೂರಸಂಪರ್ಕ ಇಲಾಖೆ ಮಾಜಿ ಸಚಿವ ಎ.ರಾಜಾ ಅವರ ಅಧಿಕಾರದ ಅವಧಿಯಲ್ಲಿ ಕಾನೂನುಕಟ್ಟಳೆ ಅನುಸರಿಸದೇ ಸ್ವೇಚ್ಛಾನುಸಾರವಾಗಿ ನೀಡಿದ 2 ಜಿ ಸ್ಪೆಕ್ಟ್ರಂ ಹಗರಣ ಎಂದೇ ಕುಖ್ಯಾತಿಗೊಳಗಾಗಿದ್ದ ಸುಮಾರು 122 ಟೆಲಿಕಾಂ ಲೈಸೆನ್ಸ್ ಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದು ಪಡಿಸಿದೆ.
ಸುಪ್ರೀಂ ಕೋರ್ಟ್ ನ ಈ ಮಹತ್ವವಾದ ತೀರ್ಪು ಕಾರ್ಪೋರೇಟ್ ವಲಯದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಈ ಟೆಲಿಕಾಂ ಲೈಸೆನ್ಸ್ ಪಡೆದ ನಂತರವಷ್ಟೇ ಷೇರು ಮಾರಾಟಕ್ಕಿಳಿದ ಮೂರು ಟೆಲಿಕಾಂ ಸಂಸ್ಥೆಗಳಿಗೆ ತಲಾ ಐದು ಕೋಟಿ ರೂಪಾಯಿ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್, 2ಜಿ ಸ್ಪೆಕ್ಟ್ರಂ ಟೆಲಿಕಾಂ ಲೈಸೆನ್ಸ್ ಗಳ ಹಂಚಿಕೆಗಾಗಿ ದೇಶದ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟಿಆರ್ ಎಐ) ಹೊಸದಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಸೂಚಿಸಿದೆ.
ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ ನಂತರ ತಿಂಗಳೊಳಗೆ ಆ ಮಾರ್ಗಸೂಚಿಗಳಂತೆ ಕ್ರಮ ಜರುಗಿಸಲು ಸೂಚಿಸಿರುವ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೋಲಿ ಅವರ ಸುಪ್ರೀಂ ಕೋರ್ಟ್ ಪೀಠ, ನಾಲ್ಕು ತಿಂಗಳೊಳಗೆ ಹರಾಜು ಪ್ರಕ್ರಿಯೆಯ ಮೂಲಕ 2 ಜಿ ಸ್ಪೆಕ್ಟ್ರಂ ಲೈಸೆನ್ಸ್ ಗಳನ್ನು ಹಂಚುವಂತೆ ನಿರ್ದೇಶನ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.