ADVERTISEMENT

ದಕ್ಷಿಣ ಮುಂಬೈಯಲ್ಲಿ ನೌಕಾಪಡೆ ವಸತಿಗೃಹ ನಿರ್ಮಾಣಕ್ಕೆ ಒಂದಿಂಚೂ ಭೂಮಿ ನೀಡುವುದಿಲ್ಲ; ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಿ: ನಿತಿನ್ ಗಡ್ಕರಿ

ಪಿಟಿಐ
Published 12 ಜನವರಿ 2018, 13:26 IST
Last Updated 12 ಜನವರಿ 2018, 13:26 IST
ದಕ್ಷಿಣ ಮುಂಬೈಯಲ್ಲಿ ನೌಕಾಪಡೆ ವಸತಿಗೃಹ ನಿರ್ಮಾಣಕ್ಕೆ ಒಂದಿಂಚೂ ಭೂಮಿ ನೀಡುವುದಿಲ್ಲ; ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಿ: ನಿತಿನ್ ಗಡ್ಕರಿ
ದಕ್ಷಿಣ ಮುಂಬೈಯಲ್ಲಿ ನೌಕಾಪಡೆ ವಸತಿಗೃಹ ನಿರ್ಮಾಣಕ್ಕೆ ಒಂದಿಂಚೂ ಭೂಮಿ ನೀಡುವುದಿಲ್ಲ; ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಿ: ನಿತಿನ್ ಗಡ್ಕರಿ   

ಮುಂಬೈ: ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರುವ ನೌಕಾಪಡೆಯ ಸಿಬ್ಬಂದಿಯೂ ದಕ್ಷಿಣ ಮುಂಬೈನಲ್ಲಿ ನೆಲೆಸಲು ಬಯಸುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಡಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ದಕ್ಷಿಣ ಮುಂಬೈನಲ್ಲಿ ನೌಕಾಪಡೆಯ ವಸತಿಗೃಹ ನಿರ್ಮಾಣಕ್ಕೆ ಒಂದು ಇಂಚೂ ಭೂಮಿಯನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಇಲ್ಲಿನ ಪಶ್ಚಿಮ ನೌಕಾ ಕಮಾಂಡ್ ಮುಖ್ಯಸ್ಥರಾದ ವೈಸ್ ಅಡ್ಮಿರಲ್ ಗಿರೀಶ್ ಲುಥ್ರಾ ಅವರ ಉಪಸ್ಥಿತಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ದಕ್ಷಿಣ ಮುಂಬೈಯ ಮಲಬಾರ್ ಹಿಲ್‌ನ ತೇಲುವ ಸೇತುವೆ ಯೋಜನೆಗೆ ನೌಕಾಪಡೆಯ ಆಕ್ಷೇಪಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

‘ವಾಸ್ತವವಾಗಿ ಉಗ್ರರು ನುಸುಳುತ್ತಿರುವ ಗಡಿಯಲ್ಲಿ ನೌಕಾಪಡೆಯ ಅಗತ್ಯವಿದೆ. ಎಲ್ಲರೂ(ನೌಕಾಪಡೆ ಸಿಬ್ಬಂದಿ) ಏಕೆ ದಕ್ಷಿಣ ಮುಂಬೈನಲ್ಲಿ ನೆಲೆಸಲು ಬಯಸುತ್ತೀರಿ? ಅವರು(ನೌಕಾಪಡೆ) ಭೂಮಿ ನೀಡುವಂತೆ ಕೇಳುತ್ತಿದ್ದಾರೆ. ಇನ್ನು ಒಂದಿಚೂ ಭೂಮಿಯನ್ನು ನೀಡಲಾಗುವುದಿಲ್ಲ. ದಯವಿಟ್ಟು ನನ್ನ ಬಳಿಗೆ ಮತ್ತೆ ಬರಬೇಡಿ ಎಂದು ಗಡ್ಕರಿ ಹೇಳಿದ್ದಾರೆ.

ADVERTISEMENT

ಮುಂಬೈಯ ಪ್ರಧಾನ ಭೂಭಾಗವಾದ ದಕ್ಷಿಣ ಮುಂಬೈನಲ್ಲಿ ಎಲ್ಲರೂ ವಸತಿಗೃಹಗಳು ಮತ್ತು ಫ್ಲಾಟ್‌ಗಳನ್ನು ನಿರ್ಮಿಸಲು ಬಯಸುತ್ತಾರೆ. ನಾವು ನಿಮ್ಮನ್ನು(ನೌಕಾಪಡೆ) ಗೌರವಿಸುತ್ತೇವೆ. ಆದರೆ, ನೀವು ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಬೇಕು ಎಂದಿದ್ದಾರೆ.

ಕೆಲವು ಪ್ರಮುಖ ಮತ್ತು ಹಿರಿಯ ಅಧಿಕಾರಿಗಳು ಮುಂಬೈಯಲ್ಲಿ ನೆಲೆಸಬಹುದು ಎಂದಿರುವ ಗಡ್ಕರಿ, ರಾಜ್ಯ ಸರಕಾರದ ಮುಂಬಯಿ ಪೋರ್ಟ್ ಟ್ರಸ್ಟ್ ಮತ್ತು ಮಹಾರಾಷ್ಟ್ರ ಸರಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂಪ್ರದೇಶವನ್ನು ಸ್ಥಳೀಯ ನಾಗರಿಕರ ಪ್ರಯೋಜನಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.