ಶ್ರೀನಗರ: ಭಾರತ– ಪಾಕಿಸ್ತಾನ ನಡುವೆ ಜಮ್ಮು ಕಾಶ್ಮೀರದ ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಹಲವಡೆ ಶುಕ್ರವಾರ ಮುಂಜಾನೆಯಿಂದ ಭಾರೀ ಗುಂಡಿನ ಕಾಳಗ ನಡೆದಿದೆ. ಭಾರತದ ಕಡೆ ಗಡಿ ಭದ್ರತಾ ಪಡೆಯ ಕಾನ್ಸ್ಟೇಬಲ್ ಜಗ್ಪಾಲ್ ಸಿಂಗ್ ಎಂಬುವವರು ಮತ್ತು ಮೂವರು ನಾಗರಿಕರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಮೃತ ನಾಗರಿಕರನ್ನು ಸುಚೇತ್ಗಡದ ಕಮಲ್ಜೀತ್ (40), ಬಾಲಕೃಷ್ಣ (30) ಮತ್ತು ದೇವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಆರ್.ಎಸ್. ಪುರದಿಂದ ಬಸಂತೇರ್ ನದಿವರೆಗಿನ ಪ್ರದೇಶದಲ್ಲಿ ಬೆಳಿಗ್ಗೆ 6.40 ರಿಂದ 6.45 ವರೆಗೆ ಭಾರೀ ಗುಂಡಿನ ಕಾಳಗ ನಡೆದಿದೆ. ಬಳಿಕವೂ ಆಗಾಗ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಸೈನಿಕರಿಗೆ ತಕ್ಕ ಮಾರುತ್ತರ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗಡಿಯಲ್ಲಿ ಪರಿಸ್ಥಿತಿ ತುಂಬ ಉದ್ವಿಗ್ನವಾಗಿದೆ. ಹೀಗಾಗಿ ಆಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.