ನವದೆಹಲಿ: ತನ್ನ ಜೀವದ ಹಂಗು ತೊರೆದು ಭಯೋತ್ಪಾದಕರಿಂದ 52 ಅಮರನಾಥ ಯಾತ್ರಾರ್ಥಿಗಳ ಜೀವ ಉಳಿಸಿದ ಗುಜರಾತ್ನ ಬಸ್ ಚಾಲಕ ಶೇಕ್ ಸಲೀಂ ಗಫೂರ್ ಅವರಿಗೆ ‘ಉತ್ತಮ ಜೀವನ್ ರಕ್ಷಾ ಪದಕ’ ಪ್ರಶಸ್ತಿ ದೊರೆತಿದೆ.
ಕೇಂದ್ರ ಗೃಹ ಸಚಿವಾಲಯ ಬುಧವಾರ ಗಫೂರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಪ್ರಕಟಿಸಿದೆ.
ನಾಗರಿಕರಿಗೆ ನೀಡುವ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದಾಗಿದೆ. ’ಸರ್ವೋತ್ತಮ ಜೀವನ ರಕ್ಷಾ ಪದಕ’ವು ಮೊದಲನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ. ಪ್ರಶಸ್ತಿ ಫಲಕದ ಜತೆಗೆ ₹1 ಲಕ್ಷ ನಗದು ಬಹುಮಾನ ಗಫೂರ್ ಅವರಿಗೆ ದೊರೆಯಲಿದೆ.
ಜಮ್ಮ ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬತೆಂಗೂ ಸಮೀಪ ಕಳೆದ ವರ್ಷ ಜುಲೈ 10ರಂದು ಅಮರನಾಥ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದಾಗ ಗಫೂರ್ ಎದೆಗುಂದಲಿಲ್ಲ. ತನ್ನ ಜೀವವನ್ನೂ ಲೆಕ್ಕಿಸದೆ, ಬಸ್ನ ಮುಂದಿನ ಗಾಜು ಪುಡಿಯಾಗಿದ್ದರೂ ಅದರಲ್ಲಿಯೇ ಬಸ್ ಅನ್ನು ಸುಮಾರು ಎರಡು ಕಿಲೋ ಮೀಟರ್ವರೆಗೆ ವೇಗವಾಗಿ ಚಾಲನೆ ಮಾಡಿದರು. ಚಾಲಕನ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ 52 ಯಾತಾರ್ಥಿಗಳ ಜೀವ ಉಳಿಯಿತು. ಈ ಘಟನೆಯಲ್ಲಿ 7 ಮಂದಿ ಸಾವಿಗೀಡಾಗಿ 14 ಮಂದಿ ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.