ನವದೆಹಲಿ: ರಜಪೂತ ಸಮುದಾಯದ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ರಾಜ್ಯಗಳಲ್ಲಿ ‘ಪದ್ಮಾವತ್’ ಪ್ರದರ್ಶನ ಗೊಳ್ಳುವ ಸಾಧ್ಯತೆ ಕ್ಷೀಣವಾಗಿದೆ.
ರಾಜಸ್ಥಾನದಲ್ಲಿ ಚಿತ್ರ ಪ್ರದರ್ಶನ ಮಾಡುವುದಿಲ್ಲ ಎಂದು ಅಲ್ಲಿನ ಚಿತ್ರಮಂದಿರಗಳ ಮಾಲೀಕರು ಈಗಾಗಲೇ ಘೋಷಿಸಿದ್ದಾರೆ. ಗುಜರಾತ್ನಲ್ಲೂ ಪ್ರದರ್ಶನ ಮಾಡದಿರಲು ಮಾಲೀಕರು ನಿರ್ಧರಿಸಿದ್ದಾರೆ.
ಕರ್ಣಿ ಸೇನಾದ ಬೆದರಿಕೆಯಿಂದ ಹೆದರಿರುವ ಹರಿಯಾಣ, ಬಿಹಾರ, ಮಧ್ಯಪ್ರದೇಶದ ಚಿತ್ರಮಂದಿರಗಳ ಮಾಲೀಕರು ಕೂಡ ಚಿತ್ರ ಪ್ರದರ್ಶಿಸುವ ಸಾಧ್ಯತೆ ಕಡಿಮೆ.
ಮನವೊಲಿಸುವ ಯತ್ನ: ರಜಪೂತ ಸಂಘಟನೆಗಳ ಮನವೊಲಿಸಲು ಚಿತ್ರ ತಯಾರಕರು ಬುಧವಾರ ತಡ ರಾತ್ರಿ ಯತ್ನಿಸಿದ್ದಾರೆ. ಸಂಘಟನೆಗಳ ಸದಸ್ಯರಿಗೆ ಚಿತ್ರವನ್ನು ತೋರಿಸಿದ್ದಾರೆ. ಆದರೆ, ತಮ್ಮ ಸದಸ್ಯರು ಚಿತ್ರ ವೀಕ್ಷಿಸಿದ್ದಾರೆ ಎಂಬ ವರದಿಯನ್ನು ಸಂಘಟನೆಗಳ ಮುಖಂಡರು ನಿರಾಕರಿಸಿದ್ದಾರೆ.
ಬಿಗಿ ಭದ್ರತೆ: ಚಿತ್ರ ತೆರೆಗೆ ಬಂದ ನಂತರ ಸೃಷ್ಟಿಯಾಗುವ ಕಾನೂನು ಸುವ್ಯವಸ್ಥೆ ಸವಾಲನ್ನು ಎದುರಿಸಲು ಆಯಾ ರಾಜ್ಯಗಳು ಬಿಗಿ ಭದ್ರತೆ ಕೈಗೊಂಡಿವೆ. ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಸುತ್ತ ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.