ADVERTISEMENT

ರಾಮಮಂದಿರ ವಿರೋಧಿಸುವ ಮುಸ್ಲಿಮ ರು ಪಾಕ್‌ಗೆ ಹೋಗಿ

ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್‌ ಮುಖ್ಯಸ್ಥ ವಸೀಂ ಹೇಳಿಕೆ

ಪಿಟಿಐ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ವಸೀಂ ರಿಜ್ವಿ
ವಸೀಂ ರಿಜ್ವಿ   

ಫೈಜಾಬಾದ್‌ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಲಿ ಎಂದು ಉತ್ತರಪ್ರದೇಶ ಶಿಯಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ವಸೀಂ ರಿಜ್ವಿ ಹೇಳಿದ್ದಾರೆ. ಬಾಬ್ರಿ ಮಸೀದಿ–ರಾಮಜನ್ಮ ಭೂಮಿ ವಿವಾದದ ವಿಚಾರಣೆ ಫೆ.8ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ರಿಜ್ವಿ ಅವರು ಶುಕ್ರವಾರ ಅಯೋಧ್ಯೆಯ ವಿವಾದಿತ ಜಾಗದಲ್ಲಿ ಪ್ರಾರ್ಥನೆ ಆಯೋಜಿಸಿದ್ದರು. ರಾಮ ಜನ್ಮಭೂಮಿಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಅವರನ್ನು ಭೇಟಿ ಮಾಡಿದ್ದರು. ಅಲ್ಲಿ ಮಾತನಾಡಿದ ಅವರು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಿಸುವುದನ್ನು ವಿರೋಧಿಸುವ ಮತ್ತು ಬಾಬ್ರಿ ಮಸೀದಿ ನಿರ್ಮಾಣ ಮಾಡಬೇಕು ಎಂದು ಬಯಸುವ ಮೂಲಭೂತವಾದಿ ಮನಸ್ಥಿತಿ ಇರುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಬೇಕು. ಅಂಥ ಮುಸ್ಲಿಮರಿಗೆ ಭಾರತದಲ್ಲಿ ಜಾಗ ಇಲ್ಲ ಎಂದು ಹೇಳಿದ್ದಾರೆ.

‘ಮಸೀದಿಯ ಹೆಸರಿನಲ್ಲಿ ಜಿಹಾದ್‌ ಹಬ್ಬಿಸುವವರು ಐಎಸ್‌ ಮುಖ್ಯಸ್ಥ ಅಬು ಬಕ್ರ್‌ ಅಲ್‌– ಬಗದಾದಿ ಅವರ ಗುಂಪನ್ನು ಸೇರಿಕೊಳ್ಳಲಿ’ ಎಂದೂ ಹೇಳಿದ್ದಾರೆ.

ADVERTISEMENT

ಧರ್ಮ ಗುರುಗಳಿಂದ ವಿರೋಧ: ರಿಜ್ವಿ ಹೇಳಿಕೆಗೆ ಶಿಯಾ ಧರ್ಮಗುರುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಿಜ್ವಿ ಅವರು ಕೋಮಿನ ಆಧಾರದಲ್ಲಿ ಪರಿಸ್ಥಿತಿಯನ್ನು ಹದಗೆಡಿಸುತ್ತಿದ್ದಾರೆ ಎಂದು ಹೇಳಿರುವ ಶಿಯಾ ಧರ್ಮಗುರುಗಳು ತಕ್ಷಣವೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ರಿಜ್ವಿ ನಾಟಕ: ‘ವಕ್ಫ್ ಆಸ್ತಿಯನ್ನು ಅಕ್ರಮ ಮಾರಾಟ ಮಾಡಿದ ಪ್ರಕರಣದಲ್ಲಿ ರಿಜ್ವಿ ಪ್ರಮುಖ ಆರೋಪಿ’ ಎಂದು ಶಿಯಾ ಉಲೇಮ ಮಂಡಳಿಯ ಮೌಲಾನಾ ಇಫ್ತಿಕಾರ್ ಹುಸೇನ್ ಇನ್‌ಕ್ವಿಲಾಬಿ ಹೇಳಿದ್ದಾರೆ.

‘ರಿಜ್ವಿ ವಿರುದ್ಧ ಕ್ರೈಂಬ್ರ್ಯಾಂಚ್ ಮತ್ತು ಸಿಐಡಿಗಳು ದೋಷಾರೋಪ ಹೊರಿಸಿವೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಆಡಳಿತದ ಸಂದರ್ಭದಲ್ಲಿ ಮುಲಾಯಂ ಸಿಂಗ್, ನಂತರ ಆಗಿನ ಸಚಿವ ಆಜಂ ಖಾನ್ ಪರ ಇದ್ದ ರಿಜ್ವಿ ಈಗ ಬಿಜೆಪಿ ಸರ್ಕಾರದ ಒಲವು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಇನ್‌ಕ್ವಿಲಾಬಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.