ತಿರುವನಂತಪುರ: ಕೇರಳ ವಿಧಾನಸಭೆಯ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರು ಎರಡು ಕನ್ನಡಕ ಖರೀದಿಸಲು ಸರ್ಕಾರದ ಬೊಕ್ಕಸದಿಂದ ಸುಮಾರು ₹50,000 ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರ 2018–19 ಸಾಲಿನ ಬಜೆಟ್ ಮಂಡಿಸಿದ ಮರುದಿನ, ಈ ಮಾಹಿತಿ ಬಹಿರಂಗೊಂಡಿದೆ. ಶುಕ್ರವಾರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವರು, ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದಿದ್ದರು.
ವಕೀಲ ಡಿ.ಬಿ. ಬಿನು ಎಂಬವರು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದ ಮಾಹಿತಿಯಲ್ಲಿ, ಶ್ರೀರಾಮಕೃಷ್ಣನ್ ಅವರು ಕನ್ನಡಕದ ಗಾಜುಗಳಿಗೆ ₹ 45,000 ಹಾಗೂ ಚೌಕಟ್ಟಿಗೆ ₹4,900 ಖರ್ಚು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
2016 ಅಕ್ಟೋಬರ್ 5ರಿಂದ 2018 ಜನವರಿವರೆಗಿನ ಕಾಲಾವಧಿಯಲ್ಲಿ ಸ್ಪೀಕರ್ ಅವರು ₹4.25 ಲಕ್ಷ ವೈದ್ಯಕೀಯ ಮರುಪಾವತಿ ಹಣ ಪಡೆದಿದ್ದರು ಎಂಬ ಅಂಶವೂ ತಿಳಿದು ಬಂದಿದೆ.
‘ಸ್ಪೀಕರ್ ಅವರು ಸಲ್ಲಿಸಿರುವ ವೈದ್ಯಕೀಯ ವೆಚ್ಚದ ಬಿಲ್ಗಳ ಪ್ರತಿಗಳನ್ನು ನನಗೆ ನೀಡಿಲ್ಲ. ಇದಕ್ಕಾಗಿ ರಾಜ್ಯ ಮಾಹಿತಿ ಹಕ್ಕು ಪ್ರಾಧಿಕಾರದ ಮೊರೆ ಹೋಗುತ್ತೇನೆ’ ಎಂದು ಬಿನು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.