ಅಗರ್ತಲ: ಪಾಕಿಸ್ತಾನದ ಸೇನೆ ನಮ್ಮ ಭೂಪ್ರದೇಶದ ಮೇಲೆ ಒಂದು ಗುಂಡಿನ ದಾಳಿ ನಡೆಸಿದರೆ ಅಸಂಖ್ಯಾತ ಬುಲೆಟ್ಗಳಿಂದ ಅದಕ್ಕೆ ಪ್ರತ್ಯುತ್ತರ ನೀಡಿ ಎಂದು ನಮ್ಮ ಸೇನಾ ಪಡೆಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ತ್ರಿಪುರಾದ ಬರ್ಜಲದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನೆರೆ ರಾಷ್ಟ್ರದೊಂದಿಗೆ ಶಾಂತಿಯುತ ಸಂಬಂಧ ಕಾಪಾಡಲು ಭಾರತ ಬಯಸುತ್ತದೆ. ಆದರೆ, ಪಾಕಿಸ್ತಾನವೇ ಭಾರತವನ್ನು ವಿಭಜಿಸಲು ಯತ್ನಿಸುತ್ತಿದೆ’ ಎಂದು ಹೇಳಿದರು.
‘ನಮ್ಮ ನೆರೆ ರಾಷ್ಟ್ರವಾಗಿ, ಪಾಕಿಸ್ತಾನದ ಮೇಲೆ ಮೊದಲು ದಾಳಿ ನಡೆಸಲು ನಾವು ಇಚ್ಛಿಸುವುದಿಲ್ಲ. ನೆರೆ ರಾಷ್ಟ್ರದ ಜತೆ ಶಾಂತಿ ಮತ್ತು ಸಾಮರಸ್ಯದಿಂದ ಇರಲು ನಾವು ಬಯಸುತ್ತೇವೆ. ಆದರೆ, ದುರದೃಷ್ಟವಶಾತ್ ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಮತ್ತು ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ’ ಎಂದು ರಾಜನಾಥ್ ಹೇಳಿದರು.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಗೊಂದಲ ಸೃಷ್ಟಿಸುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ನಿರಂತರ ಯತ್ನಿಸುತ್ತಿದೆ. ಕಾಶ್ಮೀರದಲ್ಲಿ ವಿಧ್ವಸಂಕ ಕೃತ್ಯಗಳನ್ನು ಎಸಗುತ್ತಿದೆ ಎಂದು ರಾಜನಾಥ್ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.