ನವದೆಹಲಿ: ದೇಶದಲ್ಲಿ ನಿರುದ್ಯೋಗ ಇರುವುದು ನಿಜ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಆದರೆ, ಅದಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಮೊದಲ ಬಾರಿ ಭಾಷಣ ಮಾಡಿದ ಅವರು, ‘ನಿರುದ್ಯೋಗವನ್ನು ನಾನು ನಿರಾಕರಿಸುತ್ತಿಲ್ಲ. ಇದು ನೀವು 55 ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕದ ಸ್ಥಿತಿ. ಯಾಕೆ ಕಾಂಗ್ರೆಸ್ ಇದಕ್ಕೆ ಪರಿಹಾರ ಕಂಡುಕೊಳ್ಳಲಿಲ್ಲ’ ಎಂದು ಪ್ರತಿಪಕ್ಷದ ವಿರುದ್ಧವೇ ಹರಿಹಾಯ್ದರು.
ಪ್ರತಿಪಕ್ಷಗಳು ಮತ್ತು ಎನ್ಡಿಎ ಮೈತ್ರಿಕೂಟದ ಟಿಡಿಪಿ ಸದಸ್ಯರ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 2ರ ವರೆಗೆ ಮುಂದೂಡಲಾಗಿತ್ತು. ಉತ್ತರ ಪ್ರದೇಶಗಳಲ್ಲಿ ನಕಲಿ ಎನ್ಕೌಂಟರ್ಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ, ಬಜೆಟ್ನಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಟಿಡಿಪಿ ಸದಸ್ಯರು ಗದ್ದಲ ಸೃಷ್ಟಿಸಿದ್ದಾರೆ.
ಮಧ್ಯಾಹ್ನ 2ಕ್ಕೆ ಕಲಾಪ ಆರಂಭವಾದ ನಂತರ ಅಮಿತ್ ಶಾ ತಮ್ಮ ಮೊದಲ ಭಾಷಣ ಆರಂಭಿಸಿದರು.
ಜಾತಿ ತಾರತಮ್ಯ ನಿವಾರಣೆ, ತ್ರಿವಳಿ ತಲಾಕ್ ಮಸೂದೆ, ಆಡಳಿತದಲ್ಲಿ ಪಾರ್ದರ್ಶಕತೆ, ಕಾಶ್ಮೀರ ವಿವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಮಿತ್ ಷಾ ಮಾತನಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.