ADVERTISEMENT

ಪಿಎನ್‌ಬಿ ಹಗರಣ: ಮತ್ತೊಬ್ಬ ಬ್ಯಾಂಕ್‌ ಅಧಿಕಾರಿ ಸೆರೆ

ಪಿಟಿಐ
Published 21 ಫೆಬ್ರುವರಿ 2018, 19:34 IST
Last Updated 21 ಫೆಬ್ರುವರಿ 2018, 19:34 IST
ಪಿಎನ್‌ಬಿ ಹಗರಣ: ಮತ್ತೊಬ್ಬ ಬ್ಯಾಂಕ್‌ ಅಧಿಕಾರಿ ಸೆರೆ
ಪಿಎನ್‌ಬಿ ಹಗರಣ: ಮತ್ತೊಬ್ಬ ಬ್ಯಾಂಕ್‌ ಅಧಿಕಾರಿ ಸೆರೆ   

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಬಹುಕೋಟಿ ಹಗರಣದಲ್ಲಿ ಸಿಬಿಐ ಮಂಗಳವಾರ ತಡರಾತ್ರಿ ಬ್ಯಾಂಕ್‌ ಜನರಲ್‌ ಮ್ಯಾನೇಜರ್‌ ರಾಜೇಶ್‌ ಜಿಂದಾಲ್‌ ಅವರನ್ನು ಬಂಧಿಸಿದೆ.

ಇದರೊಂದಿಗೆ ಬಂಧಿತ ಬ್ಯಾಂಕ್‌ ಅಧಿಕಾರಿಗಳ ಸಂಖ್ಯೆ ಆರಕ್ಕೆ ಏರಿದಂತಾಗಿದೆ.

ವಜ್ರಾಭರಣ ಉದ್ಯಮಿ ನೀರವ್‌ ಮೋದಿ–ಮೆಹುಲ್‌ ಚೋಕ್ಸಿ ಒಡೆತನದ ಕಂಪನಿಗಳ ಆರು ಅಧಿಕಾರಿಗಳು ಸೇರಿದಂತೆ ಪ್ರಕರಣದಲ್ಲಿ ಇದುವರೆಗೂ ಸಿಬಿಐ ಒಟ್ಟು 12 ಜನರನ್ನು ಬಂಧಿಸಿದೆ.

ADVERTISEMENT

ಸದ್ಯ ದೆಹಲಿಯ ಪಿಎನ್‌ಬಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿರುವ ಜಿಂದಾಲ್‌ ಈ ಹಿಂದೆ ಮುಂಬೈನ ಬ್ರಾಡಿ ಹೌಸ್‌ ಶಾಖೆಯ ಮುಖ್ಯಸ್ಥರಾಗಿದ್ದರು.

ಜಿಂದಾಲ್‌ ಮುಖ್ಯಸ್ಥರಾಗಿದ್ದ 2009ರಿಂದ 2011ರ ಅವಧಿಯಲ್ಲಿ ನೀರವ್‌ ಮೋದಿ ಕಂಪನಿಗಳಿಗೆ ಬೇಕಾಬಿಟ್ಟಿ ಸಾಲಖಾತ್ರಿ ಪತ್ರ ನೀಡಿದ್ದರು ಎಂದು ಸಿಬಿಐ ವಕ್ತಾರರು ಬುಧವಾರ ತಿಳಿಸಿದ್ದಾರೆ.

ಹಗರಣದ ಪ್ರಮುಖ ಆರೋಪಿ ಗೋಕುಲನಾಥ್‌ ಶೆಟ್ಟಿ ಸೇರಿದಂತೆ ಬಂಧಿತ ಅಧಿಕಾರಿಗಳೆಲ್ಲ ಮುಂಬೈನ ಬ್ರಾಡಿ ಹೌಸ್‌ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಶಾಖೆಯಲ್ಲಿ ನೀರವ್‌ ಅಪಾರ ಮೊತ್ತದ ಸಾಲ ಪಡೆದಿದ್ದಾರೆ.

ಇದೇ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮುಂಬೈನಲ್ಲಿ ಮಂಗಳವಾರ ರಾತ್ರಿ ನೀರವ್‌ ಮೋದಿಯ ಫೈರ್‌ ಸ್ಟಾರ್‌ ವಜ್ರಾಭರಣ ಸಂಸ್ಥೆಯ ಹಣಕಾಸು ವಿಭಾಗದ ಉಪಾಧ್ಯಕ್ಷ ಕಂಪನಿಯ ವಿಪುಲ್‌ ಅಂಬಾನಿ ಸೇರಿದಂತೆ ಮೂವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ನೀರವ್‌ ಮೋದಿ ಕಂಪನಿಯ ಸುಮಾರು ₹145 ಕೋಟಿ ಮೊತ್ತದ 141 ಬ್ಯಾಂಕ್ ಖಾತೆ ಮತ್ತು ನಿಶ್ಚಿತ ಠೇವಣಿಗಳನ್ನು (ಎಫ್‌.ಡಿ) ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.