ಬೆಂಗಳೂರು: ‘ಆಧಾರ್ ಬಯೊಮೆಟ್ರಿಕ್, ಆಧಾರ್ ವ್ಯವಸ್ಥೆಯಿಂದ ಸಂಗ್ರಹಿಸಿರುವ ದತ್ತಾಂಶ ನಿರ್ವಹಣೆ ಗುತ್ತಿಗೆಯನ್ನು ಅಮೆರಿಕ ಸೇರಿ 4 ವಿದೇಶಿ ಕಂಪನಿಗಳಿಗೆ ನೀಡಿರುವ ಬಗೆಗಿನ ಆಕ್ಷೇಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಿ‘ ಎಂದು ಹೈಕೋರ್ಟ್, ಅರ್ಜಿದಾರರಿಗೆ ಸಲಹೆ ನೀಡಿದೆ.
ಈ ಸಂಬಂಧ ಥಣಿಸಂದ್ರ ನಿವಾಸಿ ಮ್ಯಾಥ್ಯೂ ಥಾಮಸ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ‘ಈ ಕುರಿತು ಸುಪ್ರಿಂ ಕೋರ್ಟ್ ವಿಚಾರಣೆ ನಡೆಸುವುದೇ ಸೂಕ್ತ’ ಎಂದಿತು. ಈ ಸಲಹೆಯನ್ನು ಸ್ವೀಕರಿಸಿದ ಅರ್ಜಿದಾರರು, ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.
ಮನವಿಯೇನು?: ‘ಆಧಾರ್ ಬಯೊ ಮೆಟ್ರಿಕ್ ಮತ್ತು ಆಧಾರ್ ಮೂಲಕ ಸಂಗ್ರಹಿಸಲಾದ ದತ್ತಾಂಶಗಳ ನಿರ್ವ ಹಣೆ ಗುತ್ತಿಗೆಯನ್ನು 4 ವಿದೇಶಿ ಕಂಪನಿಗಳಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಅಮೆರಿಕದ ಕಂಪನಿಯು ಅಲ್ಲಿನ ಎಫ್ಬಿಐ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ, ಆಧಾರ್ ದತ್ತಾಂಶ ಈ ಎಲ್ಲಾ ಕಂಪನಿಗಳಿಗೆ ಸುಲಭವಾಗಿ ಲಭ್ಯವಾಗುತ್ತದೆ’ ಎಂಬುದು ಅರ್ಜಿದಾರರ ಆಕ್ಷೇಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.