ADVERTISEMENT

ಕಾಶ್ಮೀರ ವಿಭಜನೆ ವದಂತಿ: ಸಭೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 21:59 IST
Last Updated 9 ಜೂನ್ 2021, 21:59 IST
ಶ್ರೀನಗರದಲ್ಲಿ ರಾಜಕೀಯ ಮುಖಂಡರ ಸಭೆ
ಶ್ರೀನಗರದಲ್ಲಿ ರಾಜಕೀಯ ಮುಖಂಡರ ಸಭೆ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರವನ್ನು ಪುನಃ ವಿಭಜನೆ ಮಾಡಲಾಗುತ್ತದೆ ಎಂಬ ವದಂತಿಗಳು ಹಬ್ಬಿದ ಬೆನ್ನಲ್ಲೇ, ಪೀಪಲ್ಸ್‌ ಅಲಯೆನ್ಸ್‌ ಫಾರ್‌ ಗುಪ್ಕಾರ್‌ ಡಿಕ್ಲರೇಷನ್‌ (ಪಿಎಜಿಡಿ), ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಿವಾಸದಲ್ಲಿಬುಧವಾರ ಸಭೆ ನಡೆಸಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಅನಿಶ್ಚಿತ ಪರಿಸ್ಥಿತಿ ತಲೆದೋರಿರುವ ಕಾರಣ ಮುಫ್ತಿ ಸೂಚನೆ ಮೇರೆಗೆ ಈ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸಭೆ ಕುರಿತು ಮಾಹಿತಿ ನೀಡಿದ ಸಿಪಿಎಂ ಹಿರಿಯ ನಾಯಕ ಮಹಮ್ಮದ್‌ ಯೂಸುಫ್‌ ತಾರಿಗಾಮಿ, ‘ಜಮ್ಮು ಮತ್ತು ಕಾಶ್ಮೀರದಸದ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ನಾವು ಹಲವಾರು ತಿಂಗಳುಗಳ ಸಭೆ ಬಳಿಕ ಸೇರಿದ್ದೇವೆ. ಈ ಸಭೆ ಫಲಪ್ರದವಾಗಲಿದೆ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ಪಿಎಜಿಡಿ ಎಂದರೆ ಎನ್‌ಸಿ, ಪಿಡಿಪಿ, ಸಿಪಿಐ, ಸಿಪಿಎಂ, ಪೀಪಲ್ಸ್‌ ಮೂವ್‌ಮೆಂಟ್‌ ಮತ್ತು ಅವಾಮಿ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳ ಮೈತ್ರಿಕೂಟ. 2019ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಹಿಂಪಡೆದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು
ಮರುಸ್ಥಾಪಿಸುವ ದೃಢ ನಿರ್ಧಾರದೊಂದಿಗೆ ಈ ಮೈತ್ರಿಕೂಟವನ್ನು ರಚಿಸಲಾಗಿದೆ. ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ನಡೆಯುವ ವೇಳೆಯಲ್ಲಿ 2 ತಿಂಗಳ ಕಾಲ ಪಿಎಜಿಡಿ ಸಕ್ರಿಯವಾಗಿತ್ತು. ಜನವರಿಯಲ್ಲಿ ಸಜ್ಜದ್‌ ಲೋನ್‌ ನೇತೃತ್ವದ ಪೀಪಲ್ಸ್‌ ಕಾನ್ಫರೆನ್ಸ್ ಮೈತ್ರಿಕೂಟದಿಂದ ಹೊರಗೆ ಹೋದ ಬಳಿಕ ಮೈತ್ರಿಕೂಟ ತಟಸ್ಥವಾಗಿತ್ತು. 2021ರಲ್ಲಿ ಇದೇ ಮೊದಲ ಬಾರಿಗೆ ಸಭೆ ಸೇರಿದೆ.

ADVERTISEMENT

ಕೆಲದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಚಲನವಲನಗಳು ಕಂಡುಬರುತ್ತಿವೆ. ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಗವರ್ನರ್‌ ಮನೋಜ್‌ ಸಿನ್ಹಾ ದೆಹಲಿಗೆ ಭೇಟಿ ನೀಡಿದ್ದರು. ಹೀಗಾಗಿ, ಕೇಂದ್ರ ಸರ್ಕಾರ ಮತ್ತೊಂದು ಮಹತ್ತರ ಯೋಜನೆ ಹಮ್ಮಿಕೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವದಂತಿ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.