ADVERTISEMENT

ಪಂಜಾಬ್| ಅಮೃತ್‌ಪಾಲ್ ಶೋಧ ಕಾರ್ಯಾಚರಣೆ ರಾಜಕೀಯ ನಾಟಕ: ಪ್ರತಾಪ್ ಸಿಂಗ್ ಬಾಜ್ವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2023, 17:04 IST
Last Updated 23 ಮಾರ್ಚ್ 2023, 17:04 IST
ಪಂಜಾಬ್  ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವ –ಸಂಗ್ರಹ ಚಿತ್ರ
ಪಂಜಾಬ್ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವ –ಸಂಗ್ರಹ ಚಿತ್ರ   

ಚಂಡೀಗಡ: ಹಿಂಸಾಚಾರ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದ ಆರೋಪಿ ಸಿಖ್ ಮೂಲಭೂತವಾದಿ, ಖಾಲಿಸ್ತಾನದ ಪರ ಮುಂದಾಳು ಅಮೃತ್‌ಪಾಲ್ ಸಿಂಗ್ ಅವರ ಪತ್ತೆಗಾಗಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯನ್ನು ಪಂಜಾಬ್‌ ವಿಧಾನಸಭೆ ವಿಪಕ್ಷ ನಾಯಕ ಕಾಂಗ್ರೆಸ್‌ನ ಪ್ರತಾಪ್ ಸಿಂಗ್ ಬಾಜ್ವ ಅವರು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮೃತ್‌ಪಾಲ್ ಅವರನ್ನು ಅಮೃತಸರದಲ್ಲಿರುವ ಆತನ ಹಳ್ಳಿಯಲ್ಲೇ ಬಂಧಿಸಬಹುದಿತ್ತು. ಆದರೆ ಪತ್ತೆ ಕಾರ್ಯಾಚರಣೆ ಜಲಂಧರ್ ಪ್ರದೇಶದಲ್ಲಿ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿರುವ ಕಾರಣ ಸರ್ಕಾರವು ರಾಜಕೀಯ ತಂತ್ರಗಾರಿಕೆ ಮೂಲಕ ಅಮೃತ್‌ಪಾಲ್‌ರ ಶೋಧದ ನಾಟಕವಾಡುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಭಗವಂತ ಮಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಒತ್ತಾಯಿಸಿದರು.

ಅಮೃತ್‌ಪಾಲ್ ತಪ್ಪಿಸಿಕೊಂಡ ನಂತರ ಐದು ದಿನಗಳಿಂದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ADVERTISEMENT

ಜಲಂಧರ್‌ನ ಸಂಸದರಾದ ಕಾಂಗ್ರೆಸ್‌ ಪಕ್ಷದ ಸಂತೋಖ್ ಸಿಂಗ್ ‘ಭಾರತ್ ಜೋಡೋ' ಯಾತ್ರೆಯ ವೇಳೆ ಹಠಾತ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದು ತೆರವಾದ ಅವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಉಪ ಚುನಾವಣಾ ದಿನಾಂಕವನ್ನು ಆಯೋಗ ಇನ್ನೂ ತಿಳಿಸಿಲ್ಲ. ಈ ಸ್ಥಾನಕ್ಕಾಗಿ ಕಾಂಗ್ರೆಸ್, ಆಪ್ ಹಾಗೂ ಅಕಾಲಿದಳಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.