ಅಮರಾವತಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ಸೂಚಿಸಲು ತೆರಳುತ್ತಿದ್ದ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಪಕ್ಷದ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಅವರನ್ನು ಎನ್ಟಿಆರ್ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ನಂದ್ಯಾಲದಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಕ್ರಮವನ್ನು ಪವನ್ ಕಲ್ಯಾಣ್ ತೀವ್ರವಾಗಿ ಖಂಡಿಸಿದ್ದರು. ಮಾಜಿ ಮುಖ್ಯಮಂತ್ರಿಯನ್ನು ಬೆಂಬಲಿಸಲು ವಿಜಯವಾಡಕ್ಕೆ ತೆರಳಲು ಪವನ್ ಯತ್ನಿಸಿದ್ದರು.
ನಿನ್ನೆ, ಪವನ್ ಕಲ್ಯಾಣ್ ಅವರು ವಿಜಯವಾಡಕ್ಕೆ ತೆರಳುವ ಉದ್ದೇಶದಿಂದ ಸಿದ್ಧವಾಗಿದ್ದ ವಿಶೇಷ ವಿಮಾನವು ಹೈದರಾಬಾದ್ನಿಂದ ಟೇಕ್ ಆಫ್ ಆಗದಂತೆ ನೋಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಬಳಿಕ, ರಸ್ತೆ ಮಾರ್ಗದ ಮೂಲಕ ಪವನ್ ಕಲ್ಯಾಣ್ ವಿಜಯವಾಡದತ್ತ ತೆರಳಲು ಮುಂದಾದರು. ಶನಿವಾರ ಎರಡು ಬಾರಿ ಎನ್ಟಿಆರ್ ಜಿಲ್ಲೆಯಲ್ಲಿ ಅವರ ಬೆಂಗಾವಲು ವಾಹನವನ್ನು ತಡೆಹಿಡಿಯಲಾಯಿತು. ಬಳಿಕ, ಇಂದು ವಿಜಯವಾಡದ ಮಂಗಳಗಿರಿ ಕಡೆಗೆ ನಡೆದುಕೊಂಡೇ ತೆರಳಲು ಪವನ್ ಕಲ್ಯಣ್ ಮುಂದಾದರು.
ಅದಕ್ಕೂ ಪೊಲೀಸರು ತಡೆ ಹಾಕಿದ ಹಿನ್ನೆಲೆಯಲ್ಲಿ ಕಲ್ಯಾಣ್ ಅವರು ಅನುಮಂಚಿಪಲ್ಲಿಯಲ್ಲಿ ರಸ್ತೆಯ ಮೇಲೆ ಮಲಗಿಸಿ ಪ್ರತಿಭಟನೆ ನಡೆಸಿದರು. ಬಳಿಕ, ಅವರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
‘ನಾವು ಪವನ್ ಕಲ್ಯಾಣ್ ಮತ್ತು ಮನೋಹರ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ನಾವು ಅವರನ್ನು ವಿಜಯವಾಡಕ್ಕೆ ಕರೆದೊಯ್ಯುತ್ತಿದ್ದೇವೆ’ಎಂದು ನಂದಿಗಾಮ ಉಪವಿಭಾಗದ ಪೊಲೀಸ್ ಅಧಿಕಾರಿ ಜನಾರ್ದನ್ ನಾಯ್ಡು ತಿಳಿಸಿದ್ದಾರೆ.
ಇದನ್ನೂ ಓದಿ..
ಭ್ರಷ್ಟಾಚಾರ ಪ್ರಕರಣ: ಚಂದ್ರಬಾಬು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಐಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.