ತಿರುವನಂತಪುರಂ: ‘ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಪ್ರವೇಶಿಸಬಹುದು’ ಎಂದುಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಬೆಂಬಲಿಸಿದ್ದ ಸ್ವಾಮೀಜಿಯೊಬ್ಬರು ನಡೆಸುತ್ತಿದ್ದ ಆಶ್ರಮಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಶಬರಿಮಲೆ ವಿವಾದ ಸಂಬಂಧಸುಪ್ರೀಂಕೋರ್ಟ್ಸೆಪ್ಟೆಂಬರ್ 28 ರಂದುತೀರ್ಪು ನೀಡಿತ್ತು.
ಸುಪ್ರೀಂ ಆದೇಶವನ್ನು ಜಾರಿಗೊಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಡೆಯನ್ನು ಸ್ವಾಮಿ ಸಂದೀಪಾನಂದ ಗಿರಿ ಎನ್ನುವವರು ಬೆಂಬಲಿಸಿದ್ದರು. ಹೀಗಾಗಿ ಕುಂದಮಂಕಡುವು ಎಂಬಲ್ಲಿ ಅವರು ನಡೆಸುತ್ತಿದ್ದಆಶ್ರಮಕ್ಕೆ ದುಷ್ಕರ್ಮಿಗಳು ಶನಿವಾರ ಬೆಳಿಗ್ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಆಶ್ರಮದಲ್ಲಿದ್ದ ಎರಡು ಕಾರು ಹಾಗೂ ಒಂದು ಸ್ಕೂಟರ್ ಕೂಡ ಬೆಂಕಿಗೆ ಆಹುತಿಯಾಗಿವೆ.ಘಟನೆ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಶ್ರಮ ಸ್ಥಳಕ್ಕೆ ಭೇಟಿ ನೀಡಿದ್ದು, ಕೃತ್ಯವನ್ನು ಖಂಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ ಬೆಹ್ರಾ, ಪ್ರಕರಣದ ತನಿಖೆಗಾಗಿ ತಿರುವನಂತಪುರಂ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ರಚಿಸುವುದಾಗಿ ಹೇಳಿದ್ದಾರೆ.
‘ಶಬರಿಮಲೆ ವಿವಾದ ಸಂಬಂಧ ಗಮನ ಸೆಳೆಯಲು ಸಿಪಿಐ(ಎಂ) ಈ ರೀತಿ ಮಾಡಿದೆ. ಆಶ್ರಮದ ಮೇಲೆ ನಡೆದಿರುವ ದಾಳಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಬಿಜೆಪಿ ನಾಯಕ ಪಿ.ಕೆ.ಕೃಷ್ಣದಾಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.