ADVERTISEMENT

ಕಲ್ಲಿದ್ದಲು ಗಣಿ ಖಾಸಗಿ ವಲಯಕ್ಕೆ ಮುಕ್ತ

ಕೇಂದ್ರ ಸಚಿವ ಸಂಪುಟ ಸಭೆ: ₹20 ಲಕ್ಷ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ಗೆ ಅನುಮೋದನೆ

ಪಿಟಿಐ
Published 20 ಮೇ 2020, 21:53 IST
Last Updated 20 ಮೇ 2020, 21:53 IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಳೆದವಾರ ಘೋಷಿಸಿದ್ದ ₹ 20ಲಕ್ಷ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ಗೆ ಬುಧವಾರ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

‘ವರಮಾನ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆ ನಡೆಸುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿತು. ಇದರಿಂದ, ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಸಂಸ್ಥೆಯ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಆರ್ಥಿಕ ವ್ಯವಹಾರಗಳನ್ನು ಕುರಿತ ಸಂಪುಟ ಸಮಿತಿಯು (ಸಿಸಿಇಎ) ಆದಾಯ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲು ಮತ್ತು ಲಿಗ್ನೈಟ್‌ ನಿಕ್ಷೇಪಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿತ್ತು’ ಎಂದು ಸಚಿವಾಲಯದ ಅಧಿಕಾರಿ
ತಿಳಿಸಿದ್ದಾರೆ.

‘ಕಲ್ಲಿದ್ದಲು ಆಮದು ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಸಲುವಾಗಿ ಗಣಿಗಳನ್ನು ಹರಾಜು ಮೂಲಕ ಖಾಸಗಿಯವರಿಗೂ ಹಂಚಿಕೆ ಮಾಡಲಾಗುವುದು’ ಎಂದು ನಿರ್ಮಲಾ ಸೀತಾರಾಮನ್‌ ಕಳೆದ ವಾರ ತಿಳಿಸಿದ್ದರು.

ADVERTISEMENT

‘ಇಲ್ಲಿ ಬಿಡ್‌ದಾರರು ಆದಾಯದಲ್ಲಿ ಶೇಕಡಾವಾರು ಎಷ್ಟು ಪಾಲನ್ನು ಸರ್ಕಾರಕ್ಕೆ ನೀಡುತ್ತೇವೆ ಎಂಬುದನ್ನು ಬಿಡ್‌ ಮಾಡಬೇಕಾಗುತ್ತದೆ. ಕನಿಷ್ಠ ಪ್ರಮಾಣವನ್ನು ಶೇ 4ಕ್ಕೆ ನಿಗದಿಪಡಿಸಲಾಗಿದೆ. ಕೇಂದ್ರದ ಮಾಜಿ ವಿಚಕ್ಷಣ ಆಯುಕ್ತ ಪ್ರತ್ಯೂಷ್‌ ಸಿನ್ಹಾ ಅವರ ಸಲಹೆಯ ಮೇರೆಗೆ ಆದಾಯ ಹಂಚಿಕೆ ಮಾದರಿಯನ್ನು ರೂಪಿಸಲಾಗಿದೆ’ ಎಂದು ಕಲ್ಲಿದ್ದಲು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

‘ಇನ್ನು ಮುಂದೆ ಕಲ್ಲಿದ್ದಲಿನ ಮುಕ್ತ ವ್ಯಾಪಾರ ನಡೆಯಲಿದೆ. ಗಣಿಗಾರಿಕೆ ನಡೆಸುವ ಕಂಪನಿಗಳು ಯಾವುದೇ ನಿಬಂಧನೆಗಳಿಲ್ಲದೆ ಕಲ್ಲಿದ್ದಲನ್ನು ಮಾರಾಟ ಅಥವಾ ರಫ್ತು ಮಾಡಬಹುದು’ ಎಂದು ಉದ್ಯಮಿಗಳು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾದರೆ ಉದ್ಯೋಗಾವಕಾಶಗಳು ಹೆಚ್ಚಿ, ಗಣಿಗಾರಿಕಾ ವಲಯಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ಹೇಳಿದೆ.

‘ನೀಲಿ ಕ್ರಾಂತಿ’ಗೆ ₹20,050 ಕೋಟಿ

ಮೀನುಗಾರಿಕಾ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯ ಉದ್ದೇಶದಿಂದ ರೂಪಿಸಿರುವ ‘ನೀಲಿ ಕ್ರಾಂತಿ’ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ ಒಟ್ಟಾರೆ
₹ 20,050 ಕೋಟಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.

‘ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (ಪಿಎಂಎಂಎಸ್‌ವೈ) ಮಾಡಲಾಗುವ ಈ ಹೂಡಿಕೆಯಲ್ಲಿ, ಕೇಂದ್ರ ಸರ್ಕಾರದ ₹ 9,407 ಕೋಟಿ, ರಾಜ್ಯ ಸರ್ಕಾರದ ₹ 4,880 ಕೋಟಿ ಹಾಗೂ ಫಲಾನುಭವಿಗಳ ₹ 5,763 ಕೋಟಿ ಪಾಲು ಇರಲಿದೆ’ ಎಂದು ಪ್ರಕಟಣೆ ತಿಳಿಸಿದೆ.

2024ರೊಳಗೆ ಮೀನುಗಾರಿಕಾ ಕ್ಷೇತ್ರದಲ್ಲಿ 15 ಲಕ್ಷ ನೇರ ಉದ್ಯೋಗ
ಗಳನ್ನು ಸೃಷ್ಟಿಸುವುದು ಮತ್ತು ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸು
ವುದು ಈ ಯೋಜನೆಯ ಉದ್ದೇಶ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.