ನವದೆಹಲಿ: ಕಾಂಗ್ರೆಸ್ ಪಕ್ಷ ರಾಷ್ಟ್ರೀಯವೂ ಅಲ್ಲ, ಭಾರತೀಯವೂ ಅಲ್ಲ ಮತ್ತುಪ್ರಜಾಸತ್ತಾತ್ಮಕವೂ ಅಲ್ಲ. ಈಗ ಕಾಂಗ್ರೆಸ್ ‘ಭಾಯಿ–ಬಹಾನ್’ (ಅಣ್ಣ–ತಂಗಿ) ಪಕ್ಷವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿ ಗುರುವಾರ ವಿಚಾರಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು,‘ಕುಟುಂಬದ ಪ್ರಾಬಲ್ಯವುಳ್ಳ ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಬೆದರಿಕೆಯಾಗಿದೆ. ಇಂತಹ ಪಕ್ಷಗಳಲ್ಲಿ ಸಿದ್ಧಾಂತದ ಕೊರತೆಯಿದ್ದು, ಇಲ್ಲಿ ವ್ಯಕ್ತಿಯೊಬ್ಬನ ವೈಯಕ್ತಿಕ ಹಿತಾಸಕ್ತಿ ಸರ್ವೋಚ್ಚವಾಗಿದೆ’ ಎಂದು ಹೇಳಿದ್ದಾರೆ.
‘ಜನನದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಕುಟುಂಬದ ಪ್ರಾಬಲ್ಯವುಳ್ಳ ರಾಜಕೀಯ ಪಕ್ಷಗಳಲ್ಲಿ ಜನನ ಆಧರಿಸಿಯೇ ನಾಯಕತ್ವವನ್ನು ನಿರ್ಧರಿಸಲಾಗುತ್ತದೆ. ಇತರರನ್ನು ಕಡೆಗಣಿಸಲಾಗುತ್ತದೆ’ ಎಂದು ಕಾಂಗ್ರೆಸ್ ಹಾಗೂ ಕುಟುಂಬದ ಪ್ರಾಬಲ್ಯವುಳ್ಳ ಪ್ರಾದೇಶಿಕ ರಾಜಕೀಯ ಪಕ್ಷಗಳ ವಿರುದ್ಧ ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿದ ನಡ್ಡಾ,‘ರಾಷ್ಟ್ರೀಯ ರಾಜಕೀಯದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ವೇಳೆ, ಪಕ್ಷವು ಪ್ರಾದೇಶಿಕ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿರಲಿಲ್ಲ. ಆದರೆ, ಬಿಜೆಪಿ ವೈವಿಧ್ಯತೆಯಲ್ಲಿ ಏಕತೆ’ ಎಂಬ ತತ್ವವನ್ನು ನಂಬುತ್ತದೆ. ಹಾಗಾಗಿ, ಪ್ರಾದೇಶಿಕ ಆಕಾಂಕ್ಷಿಗಳಿಗೆ ಅವಕಾಶ ನೀಡುವುದರೊಂದಿಗೆ ಕೇಂದ್ರವನ್ನು ಬಲಿಷ್ಠಗೊಳಿಸಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.