ನವದೆಹಲಿ: ಸೂಕ್ಷ್ಮ ಕಂಪನಗಳು ಟೆಕ್ಟಾನಿಕ್ (ಭೂಮಿಯ ಮೊದಲ ಪದರದ ಚಲನೆಯಿಂದ ಉಂಟಾಗುವ ಘರ್ಷಣೆ) ಒತ್ತಡ ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ ಮತ್ತು ಭಾರತವನ್ನು ವಿನಾಶಕಾರಿ ಭೂಕಂಪಗಳಿಂದ ರಕ್ಷಿಸುತ್ತಿದೆ. ಭೂಕಂಪದ ವಿರುದ್ಧ ಪರಿಣಾಮಕಾರಿ ಪ್ರತಿಕ್ರಿಯೆ ಮತ್ತು ಕಂಪನಗಳನ್ನು ತಗ್ಗಿಸುವ ವ್ಯವಸ್ಥೆಗೆ ದೇಶವು ಒಗ್ಗಿಕೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ದೊಡ್ಡ ಮಟ್ಟದ ಭೂಕಂಪಗಳು ಸಂಭವಿಸಿದರೆ ಅದನ್ನು ನಿರ್ವಹಿಸಲು ದೇಶ ಸನ್ನದ್ಧವಾಗಿದೆ. ದೇಶದಲ್ಲಿ ಉತ್ತಮ ತರಬೇತಿ ಹೊಂದಿದ, ಉಪಕರಣಗಳಿಂದ ಸನ್ನದ್ಧವಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್ಡಿಆರ್ಎಫ್) ಇದೆ. ಯಾವ ಸಮಯದಲ್ಲಾದರೂ ಯಾವ ಪ್ರದೇಶಕ್ಕಾದರೂ ತ್ವರಿತವಾಗಿ ಈ ಪಡೆ ತಲುಪುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ನಿರ್ದೇಶಕ ಒ.ಪಿ. ಮಿಶ್ರಾ ಅವರು ತಿಳಿಸಿದ್ದಾರೆ.
ಭಾರತದ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನ ಗಡಿ ಬಳಿ ಮೂರು ಟೆಕ್ಟಾನಿಕ್ ಗಡಿಗಳು ಸಂಧಿಸುವ ತ್ರಿವಳಿ ಸಂಗಮವಿದೆ. ಇಲ್ಲಿ ಸೂಕ್ಷ್ಮ ಕಂಪನಗಳು ಸಂಭವಿಸುತ್ತಲೇ ಇರುತ್ತವೆ ಇದರಿಂದಾಗಿ ಭೂಮಿಯು ತನ್ನ ಒತ್ತಡವನ್ನು ಹೊರಹಾಕುತ್ತಲೇ ಇರುತ್ತದೆ. ಈ ಪ್ರದೇಶದಲ್ಲಿ ಕೆಲವೊಮ್ಮೆ ರಿಕ್ಟರ್ ಮಾಪಕದಲ್ಲಿ 4ರಿಂದ 5ರಷ್ಟು ತೀವ್ರತೆಯ ಭೂಕಂಪಗಳೂ ಸಂಭವಿಸುತ್ತದೆ ಎಂದು ಅವರು ತಿಳಿಸಿದರು.
ಸ್ಥಿತಿಸ್ಥಾಪಕತ್ವ ಗುಣಗುಳ್ಳ ಕಟ್ಟಡಗಳನ್ನು ಕಟ್ಟುವುದರಿಂದ ಭೂಕಂಪದ ತೀವ್ರತೆಯನ್ನು ತಗ್ಗಿಸಬುಹುದು ಎಂದು ಅವರು ಹೇಳಿದರು.
ಟರ್ಕಿಯಲ್ಲಿ ಎರಡು ತ್ರಿವಳಿ ಸಂಗಮಗಳಿವೆ. ಅವುಗಳಲ್ಲಿ ಒಂದಾದ ಅನಾಟೋಲಿಯನ್ ಟೆಕ್ಟಾನಿಕ್ ಗಡಿ ಮತ್ತು ಆಫ್ರಿಕನ್ ಗಡಿಯ ನಡುವೆ ಘರ್ಷಣೆ ಉಂಟಾದ್ದರಿಂದ ಟರ್ಕಿಯಲ್ಲಿ ಭಾರಿ ಭೂಕಂಪ ಸಂಭವಿಸಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.