ನವದೆಹಲಿ: ದೆಹಲಿ ಅಬಕಾರಿ ಗುತ್ತಿಗೆ ಹಗರಣ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಪೂರಕ ಚಾರ್ಜ್ಶೀಟ್ ತಳ್ಳಿಹಾಕಿರುವ ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಇ.ಡಿ ದಾಖಲಿಸಿರುವ ಈ ಪ್ರಕರಣಗಳು ನಕಲಿ ಮತ್ತು ಈ ಪ್ರಕರಣಗಳನ್ನು ಸರ್ಕಾರ ಉರುಳಿಸಲು ಬಳಸುವ ಹುನ್ನಾರವಾಗಿದೆ’ ಎಂದು ಗುರುವಾರ ಆರೋಪಿಸಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ಇ.ಡಿ ಪ್ರಕರಣಗಳನ್ನು ದಾಖಲಿಸುವುದಿಲ್ಲ. ಆದರೆ, ಶಾಸಕರನ್ನು ಖರೀದಿಸಲು ಮತ್ತು ಸರ್ಕಾರಗಳನ್ನು ಉರುಳಿಸಲು ಸಹಾಯ ಮಾಡುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಪ್ರಸ್ತುತ ಸರ್ಕಾರದ ಅಧಿಕಾರಾವಧಿಯಲ್ಲಿ ಇ.ಡಿ 5,000 ಚಾರ್ಜ್ ಶೀಟ್ಗಳನ್ನು ಸಲ್ಲಿಸಿದೆ. ಇದರಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಇ.ಡಿ ದಾಖಲಿಸಿದ ಎಲ್ಲ ಪ್ರಕರಣಗಳು ನಕಲಿ ಮತ್ತು ಅವುಗಳನ್ನು ಸರ್ಕಾರಗಳನ್ನು ಉರುಳಿಸಲು ಅಥವಾ ಹೊಸ ಸರ್ಕಾರ ತರಲು ಬಳಸಲಾಗುತ್ತಿದೆ’ ಎಂದು ಆರೋಪ ಮಾಡಿದರು.
ಇ.ಡಿ ಸಲ್ಲಿಸಿರುವ ಚಾರ್ಜ್, ಶೀಟ್ ಅರವಿಂದ ಕೇಜ್ರಿವಾಲ್ ಮತ್ತು ಅವರ ಪಕ್ಷದ ನಿಜಮುಖ ಬಹಿರಂಗಪಡಿಸಿದೆ ಎಂದು ಬಿಜೆಪಿಯು, ದೆಹಲಿಯ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.