ADVERTISEMENT

ಮಾಜಿ ಸಂಸದರ ಬಂಗಲೆ ತೆರವಿಗೆ ಪೊಲೀಸ್‌ ಬಲ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:46 IST
Last Updated 8 ಅಕ್ಟೋಬರ್ 2019, 19:46 IST

‌‌ನವದೆಹಲಿ: ಮಾಜಿ ಸಂಸದರು ಸರ್ಕಾರಿ ಬಂಗಲೆ ತೆರವು ಮಾಡದಿದ್ದರೆ ಪೊಲೀಸ್‌ ಬಲಪ್ರಯೋಗಕ್ಕೆ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮುಂದಾಗಿದೆ.

ಲೋಕಸಭೆಯ ಸುಮಾರು 50 ಮಾಜಿ ಸದಸ್ಯರು ಸರ್ಕಾರಿ ಬಂಗಲೆಗಳನ್ನು ಇನ್ನೂ ತೆರವು ಮಾಡಿಲ್ಲ. ‘ಮಕ್ಕಳು ದೆಹಲಿಯಲ್ಲಿ ಓದುತ್ತಿದ್ದಾರೆ, ಕುಟುಂಬದ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ, ಬೇರೆ ಮನೆ ಸಿಕ್ಕಿಲ್ಲ’ ಎಂಬಂತಹ ಕಾರಣಗಳನ್ನು ಕೊಟ್ಟು ಈ ಮಾಜಿ ಸಂಸದರು ಸರ್ಕಾರಿ ಬಂಗಲೆಗಳನ್ನು ಇನ್ನೂ ತೆರವು ಮಾಡಿಲ್ಲ.

ಬಂಗಲೆ ತೆರವು ಮಾಡಲು ಮಾಜಿ ಸಂಸದರಿಗೆ ಮೂರು ದಿನದ ಗಡುವು ನೀಡಲಾಗುವುದು. ಆಗಲೂ ಅವರು ಮನೆ ಬಿಟ್ಟು ಹೋಗದಿದ್ದರೆ ಪೊಲೀಸ್‌ ಬಲ ಪ್ರಯೋಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರು ಬಂಗಲೆ ಉಳಿಸಿಕೊಳ್ಳಲು ಅವಕಾಶ ನೀಡಲಾಗು
ವುದು. ಭದ್ರತೆಯ ಕಾರಣದಿಂದ ಈ ನಿರ್ಧಾರ ಎಂದು ಸಚಿವಾಲಯ ಹೇಳಿದೆ.

ಸುಮಾರು 200 ಮಾಜಿ ಸಂಸದರು ಅಧಿಕೃತ ಬಂಗಲೆಗಳನ್ನು ತೆರವು ಮಾಡಿರಲಿಲ್ಲ. ಒಂದು ವಾರದಲ್ಲಿ ಮನೆ ಬಿಟ್ಟುಕೊಡುವಂತೆ ಲೋಕಸಭೆಯ ವಸತಿ ಸಮಿತಿಯು ಆ. 19ರಂದು ನೋಟಿಸ್‌ ನೀಡಿತ್ತು. ಮನೆ ಬಿಟ್ಟುಕೊಡದಿದ್ದರೆ ಮುಂದಿನ ಮೂರು ದಿನಗಳಲ್ಲಿ ವಿದ್ಯುತ್‌, ನೀರು ಮತ್ತು ಅಡುಗೆ ಅನಿಲ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿತ್ತು.

ಅದಾದ ಬಳಿಕ ಹಲವು ಮಾಜಿ ಸಂಸದರು ಮನೆ ಬಿಟ್ಟುಕೊಟ್ಟಿದ್ದರು. ಸುಮಾರು 50 ಮಂದಿ ಮಾತ್ರ ಇನ್ನೂ ಸರ್ಕಾರಿ ಬಂಗಲೆಗಳಲ್ಲಿಯೇ ಇದ್ದಾರೆ.

ನಿಯಮ ಪ್ರಕಾರ, ಲೋಕಸಭೆಯ ಅವಧಿ ಪೂರ್ಣಗೊಂಡು ಒಂದು ತಿಂಗಳಲ್ಲಿ ಮಾಜಿ ಸಂಸದರು ಮನೆ ಬಿಟ್ಟುಕೊಡಬೇಕು. ಮೇ 25ರಂದು 16ನೇ ಲೋಕಸಭೆಯ ಅವಧಿ ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.