ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಐವರು ರೋಗಿಗಳು ಮೃತಪಟ್ಟಿದ್ದು, ಯುಪಿಎಸ್ ಕೊಠಡಿಯಿಂದ ಬಂದ ಹೊಗೆಯೇ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
‘ತಜ್ಞ ವೈದ್ಯರ ತಂಡ ತನಿಖೆ ನಡೆಸುತ್ತಿದೆ. ಹೊಗೆಗೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸಕ್ಯೂಟ್ ಅಥವಾ ಯುಪಿಎಸ್ ಕೊಠಡಿಯಲ್ಲಿದ್ದ ಹಾನಿಗೊಂಡಿರುವ ಬ್ಯಾಟರಿಗಳು ಘಟನೆಗೆ ಕಾರಣ ಇರಬಹುದು ಎಂಬುದಾಗಿ ಶಂಕಿಸಲಾಗಿದೆ’ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಗೆ ಯುಪಿಎಸ್ ಕೊಠಡಿಯಿಂದ ಹೊಗೆ ಬರಲಾರಂಭಿಸಿತು. ಬಳಿಕ 151 ರೋಗಿಗಳಿದ್ದ ಕೊಠಡಿಯಲ್ಲಿ ಹೊಗೆ ಆವರಿಸಿತು. ಆಸ್ಪತ್ರೆ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ರೋಗಿಗಳನ್ನು ಸ್ಥಳಾಂತರಿಸಿದರು. ಈ ವೇಳೆ ಐವರು ರೋಗಿಗಳು ಮೃತಪಟ್ಟಿದ್ದಾರೆ. ಹೊಗೆಯಿಂದಾಗಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪವನ್ನು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.
‘ದಾಖಲೆಗಳ ಪ್ರಕಾರ ಯುಪಿಎಸ್ ಮತ್ತು ಬ್ಯಾಟರಿ ನಿರ್ವಹಣೆ ಸಮರ್ಪಕವಾಗಿತ್ತು’ ಎಂದು ಸಚಿವೆ ವೀಣಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.