ಶಿಕ್ಷಣ ಮಾರ್ಗದರ್ಶಿ
ಚೆನ್ನೈ: ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ತೊಂದರೆ ಅನುಭವಿಸಿದ್ದಾಗಿ ಕೆಲ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ‘ನೀಟ್–ಯುಜಿ–2025’ ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ತಡೆ ನೀಡಿದೆ.
ನ್ಯಾಯಮೂರ್ತಿ ವಿ.ಲಕ್ಷ್ಮೀನಾರಾಯಣನ್ ಅವರು ಮಧ್ಯಂತರ ತಡೆ ನೀಡಿ ಶುಕ್ರವಾರ ಆದೇಶಿಸಿದ್ದು, ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದ್ದಾರೆ.
ಚೆನ್ನೈನ ಆವಡಿಯಲ್ಲಿರುವ ಪಿ.ಎಂ ಶ್ರೀ ಕೇಂದ್ರೀಯ ವಿದ್ಯಾಲಯ (ಸಿಆರ್ಪಿಎಫ್)ದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಮೇ 4ರಂದು ಮಧ್ಯಾಹ್ನ 3ರಿಂದ 4.15ರ ವರೆಗೆ ‘ನೀಟ್–ಯುಜಿ’ ನಡೆಯಿತು. ಈ ವೇಳೆ, ಭಾರಿ ಮತ್ತು ಬಿರುಗಾಳಿ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡು, ಪರೀಕ್ಷೆ ಬರೆಯಲು ಕಷ್ಟವಾಯಿತು’ ಎಂದು 13 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
‘ಪರೀಕ್ಷಾ ಕೇಂದ್ರದಲ್ಲಿ ಜನರೇಟರ್ ಅಥವಾ ಇನ್ವರ್ಟರ್ನಂತಹ ಪರ್ಯಾಯ ವ್ಯವಸ್ಥೆ ಇರಲಿಲ್ಲ. ಉತ್ತಮ ಬೆಳಕು ಇಲ್ಲದ ಕಾರಣ, ನಿಗದಿತ ಸ್ಥಳದಿಂದ ಬೇರೆಡೆ ಕುಳಿತು ಪರೀಕ್ಷೆ ಬರೆಯಬೇಕಾಯಿತು. ಇಷ್ಟೊಂದು ಅಡಚಣೆ ಉಂಟಾಗಿದ್ದರೂ, ನಮಗೆ ಹೆಚ್ಚುವರಿ ಸಮಯ ನೀಡಲಿಲ್ಲ. ಹೀಗಾಗಿ, ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ’ ಎಂದೂ ಅರ್ಜಿಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.