ADVERTISEMENT

ನಿಷ್ಠುರತೆ ಹೆಚ್ಚಿಸುತ್ತಿರುವ ಶಾಸನಸಭೆ: ಸುಪ್ರೀಂ ಕೋರ್ಟ್ ವಿಷಾದ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:50 IST
Last Updated 28 ಜನವರಿ 2022, 19:50 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ವಿಧಾನಸಭೆ ಹಾಗೂ ಸಂಸತ್ತು ನಿಷ್ಠುರತೆ ಹೆಚ್ಚಿಸುವ ಸ್ಥಳಗಳಾಗಿ ಬದಲಾಗುತ್ತಿರುವುದು ನಿರಾಶಾದಾಯಕ ಬೆಳವಣಿಗೆ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದ 12 ಜನ ಬಿಜೆಪಿ ಶಾಸಕರನ್ನು ಒಂದು ವರ್ಷ ಅಮಾನತ್ತಿನಲ್ಲಿ ಇರಿಸಿರುವ ಸ್ಪೀಕರ್‌ ಕ್ರಮವು ‘ಅಸಾಂವಿಧಾನಿಕ’ ಎಂದು ತೀರ್ಪು ನೀಡಿರುವ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಪೀಠ, ಉನ್ನತ ಮಟ್ಟದ ಚರ್ಚೆಗಳು ನಡೆಯುವ ಈ ತಾಣಗಳ ವೈಭವ ಹಾಗೂ ಗುಣಮಟ್ಟವನ್ನು ಪುನಃ ಸ್ಥಾಪಿಸಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದೆ.

‘ಸದನದ ಸದಸ್ಯರನ್ನು ಅವರ ಬೆಂಬಲಿಗರು ಅನುಸರಿಸುತ್ತಾರೆ. ಅವರಿಂದ ರಾಜನೀತಿಯನ್ನು ನಿರೀಕ್ಷಿಸಬಹುದೇ ವಿನಾ ಕ್ರೌರ್ಯವನ್ನಲ್ಲ. ಹಾಗಾಗಿ, ಸದನವನ್ನು ಅಸ್ತವ್ಯಸ್ತವಾಗಿಸುವ ನಡವಳಿಕೆಗೆ ಅವಕಾಶವಿಲ್ಲ’ ಎಂದಿದೆ.

ADVERTISEMENT

ಸದನವು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂತಹ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದಿರುವ ಪೀಠವು, ಆ ಕ್ರಮವು ಸಾಂವಿಧಾನಿಕವಾಗಿಯೂ, ಕಾನೂನುಬದ್ಧವಾಗಿಯೂ, ತರ್ಕಬದ್ಧವಾಗಿಯೂ ಇರಬೇಕಷ್ಟೇ ಎಂದು ಹೇಳಿದೆ.

ಈ ಪ್ರಕರಣವು ಇಂಥ ಉನ್ನತ ಸಂಸ್ಥೆಯಲ್ಲಿ ಉತ್ತಮ ನಡವಳಿಕೆಯನ್ನು ರೂಢಿಸುವ ಮತ್ತು ಅನುಸರಿಸುವ ಅಗತ್ಯತೆಯ ಕುರಿತ ಚಿಂತನೆಗೆ ಅವಕಾಶ ನೀಡಿದೆ. ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ಪ್ರಜಾಸತ್ತಾತ್ಮಕವಲ್ಲದ ಚಟುವಟಿಕೆಯಲ್ಲಿ ತೊಡಗುವುದನ್ನು ಖಂಡಿಸಬೇಕಿದೆ ಎಂದು ನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ ಹಾಗೂ ಸಿ.ಟಿ. ರವಿಕುಮಾರ್‌ ಅವರಿದ್ದ ಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.