ನವದೆಹಲಿ: ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ತನ್ನ ರಕ್ಷಣಾ ಕ್ಷೇತ್ರವನ್ನು ‘ಆತ್ಮನಿರ್ಭರ‘ದ ಮೂಲಕ ಸ್ವಾವಲಂಬಿಯಾಗಿಸಲು ವೇಗವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
‘ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆ ಆರಂಭಿಸಲು ನಿರ್ಧರಿಸಿದ್ದೇವೆ. ಇಂಥ ಒಂದು ನಿರ್ಧಾರದ ಮೂಲಕ 130 ಕೋಟಿ ಭಾರತೀಯರನ್ನು ‘ವೋಕಲ್ ಫಾರ್ ಲೋಕಲ್‘ನತ್ತ ಆಕರ್ಷಿಸುತ್ತಿದೆ‘ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಜೈಸಲ್ಮೇರ್ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವ ಪ್ರಧಾನಿಯವರು ಯೋಧರ ಶೌರ್ಯ ಮತ್ತು ಶ್ರೇಷ್ಠತೆಯನ್ನು ಶ್ಲಾಗಿಸಿದರು. ‘ಹಿಮಾಲಯದ ಶಿಖರಗಳು, ಮರುಭೂಮಿ, ದಟ್ಟಕಾಡುಗಳು, ಸಮುದ್ರದ ಆಳ ಎಲ್ಲೇ ಸಂಘರ್ಷಗಳು, ಸವಾಲುಗಳು ಎದುರಾದರೂ, ಅಲ್ಲೆಲ್ಲ ನೀವು ಜಯ ಸಾಧಿಸುತ್ತೀರಿ‘ ಎಂದು ಹೇಳಿದರು.
‘ನೀವು ಹಿಮಚ್ಛಾದಿತ ಪರ್ವತಗಳಲ್ಲಿ ಅಥವಾ ಮರುಭೂಮಿಗಳಲ್ಲಿರಬಹುದು. ನಾನು ನಿಮ್ಮ ನಡುವೆ ಇದ್ದಾಗ ಮಾತ್ರ ನನ್ನ ದೀಪಾವಳಿ ಆಚರಣೆ ಪೂರ್ಣಗೊಳ್ಳುತ್ತದೆ. ನಿಮ್ಮ ಮುಖದ ಮೇಲೆ ಮೂಡುವ ಮಂದಹಾಸವನ್ನು ಕಂಡಾಗ, ನನ್ನ ಸಂತೋಷ ದ್ವಿಗುಣಗೊಳ್ಳುತ್ತದೆ‘ ಎಂದು ಮೋದಿ ಹೇಳಿದ್ದಾರೆ.
‘ನಮ್ಮ ಸೈನಿಕರು ಗಡಿಗಳನ್ನು ರಕ್ಷಿಸುವುದನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ‘ ಎಂದು ಪ್ರತಿಪಾದಿಸಿದ ಅವರು, ‘ಪ್ರತಿಯೊಬ್ಬ ಭಾರತೀಯನು ನಿಮ್ಮ ಬಗ್ಗೆ ಹೆಮ್ಮೆಪಡುತ್ತಾನೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.