ಜಮ್ಮು: ಕಾಂಗ್ರೆಸ್ ಪಕ್ಷದ ಇಬ್ಬರು ಮಾಜಿ ಸಚಿವರೂ ಸೇರಿದಂತೆ ಗಣ್ಯ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದ ₹300 ಕೋಟಿ ಮೌಲ್ಯದ ಸರ್ಕಾರಿ ಜಾಗವನ್ನು ಜಮ್ಮು ಆಡಳಿತ ಮರುವಶಪಡಿಸಿಕೊಂಡಿದೆ.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅನೇಕ ಕಟ್ಟಡಗಳನ್ನು ನಾಶಪಡಿಸಲಾಗಿದೆ.
ಮರುವಶಪಡಿಸಿಕೊಳ್ಳಲಾಗಿರುವ ಸರ್ಕಾರಿ ಜಾಗದ ಮೌಲ್ಯವು ಮುದ್ರಾಂಕ ಶುಲ್ಕ ದರದ ಪ್ರಕಾರ ಸುಮಾರು ₹256 ಕೋಟಿ ಆಗಿದೆ. ಆದರೆ ಸದ್ಯದ ಮಾರುಕಟ್ಟೆ ದರ ₹300 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
ವರದಿಗಳ ಪ್ರಕಾರ, ಕಂದಾಯ ಇಲಾಖೆ ಅಧಿಕಾರಿಗಳು ಸತ್ವಾರಿ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ತಾಜ್ ಮೊಹಿ–ಉದ್–ದಿನ್ ಅವರಿಗೆ ಸೇರಿದ, ಅಕ್ರಮವಾಗಿ ನಿರ್ಮಿಸಲಾಗಿದ್ದ ಅತಿಥಿಗೃಹ, ಡೇರಿ ಸಂಸ್ಕರಣಾ ಘಟಕವೊಂದನ್ನು ಕೆಡವಲಾಗಿದೆ. ಅಲ್ಲದೆ ಅಂಗಡಿ ಮತ್ತು ಕೆಲವು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.
ಮೊಹಿ–ಉದ್–ದಿನ್ ಅವರು ಒತ್ತುವರಿ ಮಾಡಿಕೊಂಡಿದ್ದ 33 ಎಕರೆಗೂ ಹೆಚ್ಚು ಜಮೀನನ್ನು ಮರು ವಶಪಡಿಸಿಕೊಂಡಿರುವುದಾಗಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಡವಲಾಗಿರುವ ಕಟ್ಟಡಗಳು ತಮ್ಮ ಒಡೆತನದ್ದಲ್ಲ ಎಂದು ಮಾಜಿ ಸಚಿವರು ಹೇಳಿರುವ ದೃಶ್ಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ತೆರವು ಮಾಡಲಾಗಿರುವ ಜಮೀನು ಮತ್ತು ಕಟ್ಟಡಗಳ ಪೈಕಿ ಕೆಲವು ನನ್ನ ಸಂಬಂಧಿಕರ ಹೆಸರಿನಲ್ಲಿವೆ. ಅವುಗಳನ್ನು ಅವರು ನ್ಯಾಯಯುತವಾಗಿಯೇ ಖರೀದಿಸಿದ್ದರು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.