ಹೈದರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯದ ಮುಂದೆ, ಬಿಆರ್ಎಸ್ ನಾಯಕಿ ಕೆ. ಕವಿತಾ ಅವರು ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಹೈದರಾಬಾದ್ನಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಪೋಸ್ಟರ್ ಅಂಟಿಸಲಾಗಿದೆ.
ಪೋಸ್ಟರ್ನಲ್ಲಿ ಬಿ.ಎಲ್ ಸಂತೋಷ್ ಅವರ ಫೋಟೊ ಹಾಕಲಾಗಿದ್ದು, ‘ಶಾಸಕರ ಖರೀದಿ ಪ್ರಕರಣದಲ್ಲಿ ಬೇಕಾಗಿದ್ದಾರೆ‘ ಎಂದು ಬರೆಯಲಾಗಿದೆ. ಅಲ್ಲದೇ ಮೋದಿಯವರು ಮಾತುಕೊಟ್ಟಿರುವ ₹ 15 ಲಕ್ಷ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದೂ ಬರೆಯಲಾಗಿದೆ.
ಕಳೆದ ವಾರ ಮೊದಲ ಬಾರಿ ವಿಚಾರಣೆ ಹಾಜರಾಗುವ ವೇಳೆಯಲ್ಲೂ ಕೂಡ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಇತರೆ ಪಕ್ಷಗಳಿಂದ ಬಿಜೆಪಿ ಸೇರಿ ಉನ್ನತ ಸ್ಥಾನ ಪಡೆದ ನಾಯಕರ ಪೋಸ್ಟರ್ ಹಾಕಲಾಗಿತ್ತು.
ಇದೇ ವೇಳೆ ಇಡಿ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯ ವಿಚಾರಣೆ ಮಾರ್ಚ್ 24ಕ್ಕೆ ನಿಗದಿಪಡಿಸಲಾಗಿದೆ.
ಮಾರ್ಚ್ 11 ರಂದು ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದ ಕವಿತಾ ಅವರನ್ನು 8 ಗಂಟೆಗಳ ಕಾಲ ಇ.ಡಿ ವಿಚಾರಣೆ ನಡೆಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.